ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಎಲ್ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೆ ಅನ್ಯಾಯವೆಸಗಿದ್ದಾರೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
‘ಚಿರಾಗ್ ಪಾಸ್ವಾನ್ ವಿಚಾರದಲ್ಲಿ ನಿತೀಶ್ ಕುಮಾರ್ ವರ್ತಿಸಿರುವ ರೀತಿ ಸರಿಯಲ್ಲ. ಚಿರಾಗ್ ಅವರಿಗೆ ಹಿಂದೆಂದಿಗಿಂತಲೂ ಈಗ ಅವರ ತಂದೆಯ ಅಗತ್ಯವಿದೆ. ಆದರೆ, ರಾಮ್ವಿಲಾಸ್ ಪಾಸ್ವಾನ್ ಅವರು ಇಂದು ನಮ್ಮೊಂದಿಗಿಲ್ಲ. ಈ ಬಗ್ಗೆ ಬೇಸರವಿದೆ. ನಿತೀಶ್ ಕುಮಾರ್ ಅವರು ಚಿರಾಗ್ಗೆ ಅನ್ಯಾಯವೆಸಗಿದ್ದಾರೆ’ ಎಂದು ಯಾದವ್ ಹೇಳಿಕೆ ಉಲ್ಲೇಖಿಸಿ ಎಎನ್ಐ ಟ್ವೀಟ್ ಮಾಡಿದೆ.
ಬಿಹಾರ ಚುನಾವಣೆಯಲ್ಲಿ ಚಿರಾಗ್ ನೇತೃತ್ವದ ಎಲ್ಜೆಪಿ 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅಕ್ಟೋಬರ್ 21ರಿಂದ ಚಿರಾಗ್ ಪ್ರಚಾರ ಆರಂಭಿಸಲಿದ್ದಾರೆ.
‘ನನ್ನ ಅಭಿಪ್ರಾಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬಳಿ ತಿಳಿಸಿದ್ದೆ. ಅಮಿತ್ ಶಾ ಅವರು ತಾಳ್ಮೆಯಿಂದ ನನ್ನ ಮಾತುಗಳನ್ನು ಆಲಿಸಿದ್ದಾರೆ. ಆದರೆ, ಅಂತಹ ನಿರ್ಧಾರ (ನಿತೀಶ್ ಅವರೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದು) ಕೈಗೊಳ್ಳಬೇಡ ಎಂಬುದಾಗಿ ಹೇಳಿಲ್ಲ’ ಎಂದು ಚಿರಾಗ್ ಇತ್ತೀಚೆಗೆ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.