ನವದೆಹಲಿ: ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಅವರು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ತಮ್ಮ ಕುಟುಂಬವನ್ನು ಕೇಂದ್ರ ಸರ್ಕಾರವು ರಕ್ಷಿಸಬೇಕು ಎಂದು ಬಯಸಿದ್ದಾರೆ. ಅದಕ್ಕೆ ಬದಲಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಬೆಂಬಲಿಸಲು ಮುಂದಾಗಿದ್ದರು ಎಂದು ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಆರೋಪಿಸಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭ ಕೇಂದ್ರ ಸಚಿವ ನಿತ್ಯಾನಂದ ರೈ ಅವರಿಗೆ ಜೊತೆಯಾಗಿ ಸರ್ಕಾರ ರಚಿಸುವ ಪ್ರಸ್ತಾಪ ಇಟ್ಟಿದ್ದರು. ಭ್ರಷ್ಟಾಚಾರದ ಜೊತೆ ಬಿಜೆಪಿ ರಾಜಿಯಾಗಲು ಮುಂದಾಗದ ಕಾರಣ ಹತಾಶೆಗೊಂಡ ತೇಜಸ್ವಿ ಅವರು ನಿತ್ಯಾನಂದ ರೈ ತಮ್ಮ ಪಕ್ಷವನ್ನು ಸೇರಲು ಬಯಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ತೇಜಸ್ವಿ ಅವರನ್ನು ನಿತ್ಯಾನಂದ ರೈ ಅವರು ಭೇಟಿ ಮಾಡಿದ್ದು ಇದೊಂದೇ ಸಲ ಎಂದು ಜೈಸ್ವಾಲ್ ಹೇಳಿದ್ದಾರೆ.
ತೇಜಸ್ವಿ ಅವರಿಗೆ ಭ್ರಷ್ಟಾಚಾರ ಪ್ರಕರಣಗಳಿಂದ ತನ್ನ ಕುಟುಂಬ ಸದಸ್ಯರು ಜೈಲಿಗೆ ಹೋಗುವುದನ್ನು ತಪ್ಪಿಸಬೇಕಿದೆ. ಅದಕ್ಕಾಗಿ ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಬೆಂಬಲಿಸುವುದಾಗಿ ಬಂದಿದ್ದರು. ಆದರೆ ನಮ್ಮ ಪಕ್ಷ ತೇಜಸ್ವಿ ಅವರ ಪ್ರಸ್ತಾಪವನ್ನು ಒಪ್ಪಿಕೊಳ್ಳಲಿಲ್ಲ ಎಂದು ತಿಳಿಸಿದ್ದರು.
ತೇಜಸ್ವಿ ಅವರ ತಂದೆ, ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಸೇರಿದಂತೆ ಇತರ ಕುಟುಂಬ ಸದಸ್ಯರ ಮೇಲೆ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಹಿಂದೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಕುತಂತ್ರವಾಗಿದೆ ಎಂದುಆರೋಪಗಳನ್ನು ನಿರಾಕರಿಸಿದ್ದಾರೆ. ಲಾಲು ಪ್ರಸಾದ್ ಅವರು ಮೇವು ಪ್ರಕರಣದಲ್ಲಿ ತಪ್ಪಿತಸ್ಥರೆಂದು ನಿರ್ಣಯಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.