ಪಟ್ನಾ: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಮತ್ತು ಇಂಧನ ದರ ಏರಿಕೆಯನ್ನು ಖಂಡಿಸಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಸೋಮವಾರ ಬಜೆಟ್ ಅಧಿವೇಶನಕ್ಕೆ ಟ್ರ್ಯಾಕ್ಟರ್ನಲ್ಲಿ ಬಂದರು.
ವಿರೋಧಪಕ್ಷದ ನಾಯಕರೂ ಆದ ಅವರು, ‘ರಾಜ್ಯದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಇಂಧನ ದರ ಏರಿಕೆ ಮತ್ತು ಕೃಷಿ ತಿದ್ದುಪಡಿ ಮಸೂದೆಗಳ ಕುರಿತಂತೆ ಮೌನತಳೆದಿದೆ’ ಎಂದು ಟೀಕಿಸಿದರು.
ತಮ್ಮ ನಿವಾಸದಿಂದ ಟ್ರ್ಯಾಕ್ಟರ್ನಲ್ಲಿ ತೆರಳಿದ ತೇಜಸ್ವಿ ಯಾದವ್ ಜೊತೆಗೆ ಆರ್ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಅಲೋಕ್ ಮೆಹ್ತಾ ಹಾಗೂ ಇತರೆ ಮುಖಂಡರು ಜೊತೆಗಿದ್ದರು.
‘ಅಗತ್ಯ ವಸ್ತುಗಳ ದರ ಏರಿಕೆ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿಕೆ ನೀಡಬೇಕು. ಅಲ್ಲದೆ, ಬಿಹಾರದಲ್ಲಿ ಎಪಿಎಂಸಿಗಳ ರದ್ದತಿಯಿಂದ ರೈತರಿಗೆ ಆಗುವ ಲಾಭ ಏನು ಎಂದು ತಿಳಿಸಬೇಕು. ಸದ್ಯ ರಾಜ್ಯದಲ್ಲಿ ಅನೇಕ ರೈತರು ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ಕೃಷಿ ಉತ್ಪನ್ನಗಳನ್ನು ಮಾರುತ್ತಿದ್ದಾರೆ’ ಎಂದು ಯಾದವ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.