ಹೈದರಾಬಾದ್: ತೆಲಂಗಾಣ ಭಾರತದ ಅಫ್ಗಾನಿಸ್ತಾನ ಮತ್ತು ಮುಖ್ಯಮಂತ್ರಿ ಕೆಸಿಆರ್ ಅದರ ತಾಲಿಬಾನ್ ಎಂದು ವೈಎಸ್ಆರ್ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಭಾನುವಾರ ಆಕ್ರೋಶದಿಂದ ಹೇಳಿದ್ದಾರೆ.
ತೆಲಂಗಾಣ ರಾಜ್ಯ ಸರ್ವಾಧಿಕಾರಿಯಾಗಿರುವ ಕೆಸಿಆರ್ ಅವರ ಹಿಡಿತದಲ್ಲಿದೆ. ತೆಲಂಗಾಣದಲ್ಲಿ ಭಾರತೀಯ ಸಂವಿಧಾನವಿಲ್ಲ, ಕೆಸಿಆರ್ ಅವರ ಸಂವಿಧಾನವಿದೆ ಎಂದು ಆರೋಪಿಸಿದ್ದಾರೆ.
ಭಾನುವಾರ ಮಹಬೂಬಾಬಾದ್ ಪಟ್ಟಣದಿಂದ ಅವರನ್ನು ಹೈದರಾಬಾದ್ಗೆ ಸ್ಥಳಾಂತರ ಮಾಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಸದ್ಯ ಅವರ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಮಾಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಶರ್ಮಿಳಾ ಅವರು ರಾಜ್ಯದಾದ್ಯಂತ ನಡೆಸುತ್ತಿರುವ ‘ಪ್ರಜಾ ಪ್ರಸ್ಥಾನಂ’ ಪಾದಯಾತ್ರೆಯು ಶನಿವಾರ ಮೆಹಬೂಬಾಬಾದ್ ಜಿಲ್ಲೆಯಲ್ಲಿ ಸಾಗುತ್ತಿತ್ತು. ಈ ವೇಳೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಿಆರ್ಎಸ್ ಶಾಸಕ ಬನೂತ್ ಶಂಕರ್ ನಾಯ್ಕ್ ಅವರ ಕುರಿತು ಶರ್ಮಿಳಾ ಅವರು ಅವಹೇಳನಕಾರಿ ಮಾತನಾಡಿದ್ದರು ಎಂದು ಆರೋಪಿಸಲಾಗಿದೆ.
‘ಶರ್ಮಿಳಾ ಅವರ ಸುರಕ್ಷತೆಯ ದೃಷ್ಟಿಯಿಂದಲೇ ಅವರನ್ನು ವಶಕ್ಕೆ ಪಡೆದು, ಭಾನುವಾರ ಹೈದರಾಬಾದ್ಗೆ ಕಳುಹಿಸಲಾಗಿತ್ತು.
‘ಶರ್ಮಿಳಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಆರ್ಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶರ್ಮಿಳಾ ಅವರು ನಡೆಸುತ್ತಿರುವ ಪಾದಯಾತ್ರೆಗೆ ನೀಡಲಾಗಿದ್ದ ಅನುಮತಿಯನ್ನು ರದ್ದು ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.