ADVERTISEMENT

ಹೈದರಾಬಾದ್‌| ಜಲ್ಲಿ ತುಂಬಿದ ಲಾರಿ ಬಸ್‌ಗೆ ಡಿಕ್ಕಿ: 19 ಸಾವು

ಪಿಟಿಐ
Published 3 ನವೆಂಬರ್ 2025, 16:06 IST
Last Updated 3 ನವೆಂಬರ್ 2025, 16:06 IST
<div class="paragraphs"><p>ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದಲ್ಲಿ ಸೋಮವಾರ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ಗೆ ಜಲ್ಲಿಕಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದ ಬಳಿಕ ನಜ್ಜುಗುಜ್ಜಾದ ಬಸ್‌&nbsp;&nbsp;</p></div>

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದಲ್ಲಿ ಸೋಮವಾರ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ಗೆ ಜಲ್ಲಿಕಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದ ಬಳಿಕ ನಜ್ಜುಗುಜ್ಜಾದ ಬಸ್‌  

   

–ಪಿಟಿಐ ಚಿತ್ರ

ಹೈದರಾಬಾದ್‌: ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿಯೊಂದು (ಟಿಪ್ಪರ್‌) ತೆಲಂಗಾಣ ಸಾರಿಗೆ ಸಂಸ್ಥೆ ಬಸ್‌ಗೆ ಡಿಕ್ಕಿ ಹೊಡೆದು 19 ಮಂದಿ ಮೃತಪಟ್ಟು, 22 ಮಂದಿ ಗಾಯಗೊಂಡ ಘಟನೆ ಇಲ್ಲಿನ ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 6.15ರ ವೇಳೆಗೆ ಸಂಭವಿಸಿದೆ.

ADVERTISEMENT

‘ವಿಕಾರಾಬಾದ್‌ ಜಿಲ್ಲೆಯ ತಂಡೂರ್‌ ಪಟ್ಟಣದಿಂದ ಹೈದರಾಬಾದ್‌ಗೆ ಬಸ್‌ ತೆರಳುತ್ತಿತ್ತು. ಚೆವೆಲ್ಲಾದ ಮಿರ್ಜಾಗುಡದಲ್ಲಿ ನಡೆದ ಅಪಘಾತದ ಬಳಿಕ ಟಿಪ್ಪರ್‌ನಲ್ಲಿದ್ದ ಜಲ್ಲಿಕಲ್ಲುಗಳು ಬಸ್‌ಗೆ ಒಳಗೆ ತೂರಿಹೋಗಿ, ಪ್ರಯಾಣಿಕರು ಹೊರಬರಲು ಸಾಧ್ಯವಾಗದೇ ಸಿಲುಕಿಕೊಂಡರು. ನಂತರ, ರಕ್ಷಣಾ ಕಾರ್ಯಕರ್ತರು ಜೆಸಿಬಿ ಯಂತ್ರ ಬಳಸಿ, ಒಳಗೆ ಸಿಲುಕಿಕೊಂಡವರನ್ನು ಹೊರ ಕರೆತಂದರು. 19 ಮಂದಿ ಮೃತರಲ್ಲಿ ಒಂದು ಹೆಣ್ಣು ಮಗು ಸೇರಿದಂತೆ 13 ಮಂದಿ ಮಹಿಳೆಯರು ಸೇರಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಅಪಘಾತದಲ್ಲಿ ಟಿಪ್ಪರ್‌ ಹಾಗೂ ಬಸ್‌ನ ಚಾಲಕರು ಮೃತಪಟ್ಟಿದ್ದಾರೆ’ ಎಂದು ಸೈಬರಾಬಾದ್‌ನ ಪೊಲೀಸ್‌ ಕಮಿಷನರ್‌ ಅವಿನಾಶ್‌ ಮೊಹಾಂತಿ ತಿಳಿಸಿದ್ದಾರೆ.

‘ಜಲ್ಲಿ ತುಂಬಿದ ಟಿಪ್ಪರ್‌ ಚಾಲಕ ಅತೀ ವೇಗದಲ್ಲಿ ಬಂದಿದ್ದು, ಬಸ್‌ಗೆ ಡಿಕ್ಕಿ ಹೊಡೆಸಿದ. ನಂತರ ಬಸ್‌ನ ಮೇಲೆ ಟಿಪ್ಪರ್‌ ಮಗುಚಿಬಿದ್ದಿದೆ, ಆಗ ಜಲ್ಲಿಕಲ್ಲುಗಳು ಬಸ್‌ನ ಒಳಗಡೆ ತುಂಬಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಪಘಾತದ ನಿಖರ ಕಾರಣ, ತನಿಖೆಯ ಬಳಿಕವೇ ಗೊತ್ತಾಗಲಿದೆ’ ಎಂದು ಹೇಳಿದ್ದಾರೆ.

‘ರಸ್ತೆ ಕಿರಿದಾಗಿರುವುದೇ ಅಪಘಾತ ಸಂಭವಿಸಲು ಕಾರಣ’ ಎಂದು ಚೆವೆಲ್ಲಾದ ಶಾಸಕ ಕಾಳೆ ಯಡಯ್ಯ ತಿಳಿಸಿದ್ದಾರೆ.

‘ವೇಗವಾಗಿ ಬರುತ್ತಿದ್ದ ಲಾರಿಯು ಹತ್ತಿರ ಬರುತ್ತಿದ್ದಂತೆಯೇ, ಬಸ್‌ ಅನ್ನು ಚಾಲಕ ಪಕ್ಕಕ್ಕೆ ಒಯ್ದರೂ ಡಿಕ್ಕಿ ಹೊಡೆಯಿತು. ವಿದ್ಯಾರ್ಥಿಗಳು, ಪೊಲೀಸರು ಹಾಗೂ ಉದ್ಯೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು’ ಎಂದು ಬಸ್‌ನ ನಿರ್ವಾಹಕಿ ಕೆ.ರಾಧಾ ತಿಳಿಸಿದ್ದಾರೆ.

ರಾಧಾ ನೀಡಿದ ದೂರಿನಂತೆ ಚೆವೆಲ್ಲಾ ಪೊಲೀಸರು ಟಿಪ್ಪರ್‌ ಚಾಲಕ ಆಕಾಶ್‌ ಕಾಂಬ್ಳಿ ವಿರುದ್ಧ ಬಿಎನ್‌ಎಸ್‌ 106(1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನೆರವಿಗೆ ಸೂಚನೆ: ಅಪಘಾತದ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ, ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಕೆ.ರಾಮಕೃಷ್ಣ ರಾವ್‌ ಹಾಗೂ ಡಿಜಿ‍ಪಿ ಶಿವಧರ್‌ ರೆಡ್ಡಿ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಲ್ಲದೇ, ಕೆಲವು ಸಚಿವರಿಗೂ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದರು. ಗಾಯಾಳುಗಳಿಗೆ ಹೈದರಾಬಾದ್‌ನಲ್ಲಿ ಉತ್ತಮ ರೀತಿಯ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ತಲಾ ₹9 ಲಕ್ಷ ಪರಿಹಾರ: ಅಪಘಾತದಲ್ಲಿ ಸಂಭವಿಸಿದ ಪ್ರಾಣಹಾನಿಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್‌’ನಲ್ಲಿ ಕಂಬನಿ ಮಿಡಿದಿದ್ದಾರೆ.

ಇದೇ ವೇಳೆ, ಅವರು ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಮುಖ್ಯಮಂತ್ರಿಗಳ ಸೂಚನೆಯಂತೆ ಚೆವೆಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ತೆಲಂಗಾಣ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್‌ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಮೃತರ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರದಿಂದ ತಲಾ ₹5 ಲಕ್ಷ, ತೆಲಂಗಾಣ ಸಾರಿಗೆ ಸಂಸ್ಥೆಯಿಂದ ₹2 ಲಕ್ಷ ನೀಡಲಾಗುವುದು. ಅಲ್ಲದೇ, ಗಾಯಾಳುಗಳಿಗೆ ಸರ್ಕಾರದಿಂದ ತಲಾ ₹2 ಲಕ್ಷ ನೆರವು ನೀಡಲಾಗುವುದು’ ಎಂದು ಸಚಿವರು ಘೋಷಿಸಿದ್ದಾರೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದಲ್ಲಿ ಸೋಮವಾರ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ಗೆ ಜಲ್ಲಿಕಲ್ಲು ತುಂಬಿದ ಲಾರಿ ಡಿಕ್ಕಿ ಮಗುಚಿಬಿದ್ದಿರುವುದು

ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ತೆಲಂಗಾಣದ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತೈಸಿದರು

ಬಸ್‌ನೊಳಗಿದ್ದ ಜಲ್ಲಿಕಲ್ಲುಗಳನ್ನು ಹೊರತೆಗೆದ ಆಗ್ನಿಶಾಮಕ ಸಿಬ್ಬಂದಿ

ಅಪಘಾತದಲ್ಲಿ ಮೃತಪಟ್ಟ ನಂದಿನಿ ಸಾಯಿಪ್ರಿಯಾ ತನುಷಾ

ರಾಜಸ್ಥಾನದ ಜೈಪುರದಲ್ಲಿ ಸರಣಿ ಅಪಘಾತಕ್ಕೆ ಕಾರಣವಾದ ಟ್ರಕ್‌

ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿರುವುದು

ಮೃತಪಟ್ಟ ಕುಟುಂಬದ ಸದಸ್ಯರಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ ಗಾಯಗೊಂಡವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ 
ನರೇಂದ್ರ ಮೋದಿ ಪ್ರಧಾನಿ

ಸತ್ತವರಲ್ಲಿ ಚಾಲಕನ ಬದಿ ಕುಳಿತವರೇ ಹೆಚ್ಚು

‘ಬಸ್‌ ಚಾಲಕನ ಬದಿ ಕುಳಿತವರೇ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮೃತಪಟ್ಟಿದ್ದು ನಿರ್ವಾಹಕಿಯ ಬದಿ ಕುಳಿತವರಲ್ಲಿ ಹೆಚ್ಚಿನವರು ಬದುಕಿ ಉಳಿದಿದ್ದಾರೆ’ ಎಂದು ಬದುಕುಳಿದ ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಭೀಕರ ಅಪಘಾತದ ಬಗ್ಗೆ ಮಾಹಿತಿ ನೀಡಿದ ಅವರು ‘ನಾನು ನಿರ್ವಾಹಕಿಯ ಸೀಟಿನಿಂದ ಮೂರು ಸೀಟುಗಳ ಹಿಂಭಾಗದಲ್ಲಿ ಕುಳಿತಿದ್ದೆ. ಬಸ್ಸಿನಲ್ಲಿ ನಿದ್ರಿಸುತ್ತಿದ್ದ ವೇಳೆ ದೊಡ್ಡದಾದ ಶಬ್ದ ಕೇಳಿತು. ಎಚ್ಚೆತ್ತು ನೋಡಿದ ವೇಳೆ ಜಲ್ಲಿಕಲ್ಲಿನ ಅಡಿಯಲ್ಲಿ ಸಿಲುಕಿದ್ದೆ. ನನ್ನ ರೀತಿಯಲ್ಲಿ ಹಲವರು ಜಲ್ಲಿಕಲ್ಲಿನ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಅಪಘಾತದ ಬಳಿಕ ಹೊರಬಂದಿದ್ದು ಚಾಲಕನ ಹಿಂಭಾಗದಲ್ಲಿ ಕುಳಿತವರಿಗೆ ಎದ್ದು ಬರಲು ಸಾಧ್ಯವಾಗಿಲ್ಲ’ ಎಂದು ನೆನಪಿಸಿಕೊಂಡರು. ‘ನಾನು ಕಿಟಕಿ ಮೂಲಕ ತಪ್ಪಿಸಿಕೊಂಡೆ. ಉಳಿದ ಆರು ಮಂದಿ ಪ್ರಯಾಣಿಕರು ಅದೇ ರೀತಿ ಹೊರಬಂದರು. ಮತ್ತೊಬ್ಬ ಪ್ರಯಾಣಿಕರು ಕಿಟಕಿ ಒಡೆದುಹಾಕಿದ್ದರಿಂದ ಹೆಚ್ಚು ಪ್ರಯಾಣಿಕರು ಹೊರಬರಲು ಸಾಧ್ಯವಾಯಿತು’ ಎಂದು ಹೇಳಿದ್ದಾರೆ.

ಮೂವರು ಹೆಣ್ಣು ಮಕ್ಕಳನ್ನು ಕಳೆದುಕೊಂಡ ಹೆತ್ತವರು

ಚೆವೆಲ್ಲಾದ ತಂಡೂರ್‌ ಪಟ್ಟಣದ ನಿವಾಸಿ ಅಂಬಿಕಾ– ಯೆಲ್ಲಯ್ಯ ಗೌಡ್‌ ದಂಪತಿಯ ಮೂವರು ಹೆಣ್ಣು ಮಕ್ಕಳು ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೂವರೂ ಹೈದರಾಬಾದ್‌ನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ‘ಕಳೆದ ತಿಂಗಳಷ್ಟೇ ದೊಡ್ಡ ಮಗಳು ಅನುಷಾಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದೆವು. ಇಡೀ ಕುಟುಂಬವೇ ಸಂಭ್ರಮದಲ್ಲಿತ್ತು. ಇದಾದ ಕೆಲವೇ ದಿನದಲ್ಲಿ ನನ್ನ ಉಳಿದ ಮಕ್ಕಳನ್ನು ಕಳೆದುಕೊಂಡಿದ್ದೇನೆ. ನಾನು ಏಕೆ ಉಳಿದೆ ಎಂದು ಅರ್ಥವಾಗುತ್ತಿಲ್ಲ’ ಎಂದು ಎಲ್ಲಯ್ಯ ಗೌಡ್ ಕಣ್ಣೀರಿಟ್ಟರು. ಊರಿನಲ್ಲಿ ನಡೆದಿದ್ದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಸಹೋದರಿಯರಾದ ನಂದಿನಿ ಸಾಯಿಪ್ರಿಯಾ ತನುಷಾ ಬಂದಿದ್ದರು. ಮತ್ತೆ ಕಾಲೇಜಿಗೆ ತೆರಳಲು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತದಲ್ಲಿ ಮೃತಪ‍ಟ್ಟಿದ್ದಾರೆ.

ಜೈಪುರ: ನಿಂತಿದ್ದ ವಾಹನಗಳಿಗೆ ಟಿಪ್ಪರ್‌ ಡಿಕ್ಕಿ; 13 ಸಾವು

ವೇಗವಾಗಿ ಬಂದ ಟಿಪ್ಪರ್‌ ವೊಂದು ನಿಂತಿದ್ದ 17 ವಾಹನ ಗಳಿಗೆ ಡಿಕ್ಕಿ ಹೊಡೆದು 13 ಮಂದಿ ಮೃತಪಟ್ಟು 10 ಮಂದಿ ಗಾಯಗೊಂಡ ಘಟನೆ ಇಲ್ಲಿನ ಜನನಿಬಿಡ ಹರ್ಮದಾ ಪ್ರದೇಶದ ಲೊಹಾ ಮಂಡಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ರಸ್ತೆಯುದ್ದಕ್ಕೂ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಟಿಪ್ಪರ್‌ನ ಹೊಡೆತದ ರಭಸಕ್ಕೆ ಹತ್ತಾರು ಕಾರು ಬೈಕ್‌ಗಳು ನಜ್ಜುಗುಜ್ಜಾದವು.

ಅಪಘಾತದ ಕುರಿತಂತೆ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಉಪ ಮುಖ್ಯಮಂತ್ರಿಗಳಾದ ದಿಯಾ ಕುಮಾರಿ ಪ್ರೇಮ್‌ಚಾಂದ್‌ ಬೈರ್‌ವಾ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋತ್‌ ಕಂಬನಿ ಮಿಡಿದಿದ್ದಾರೆ.

‘ಅಪಘಾತಕ್ಕೀಡಾದ ಕಾರಿನಿಂದ ಒಂದಾದ ನಂತರ ಮತ್ತೊಂದು ಮೃತದೇಹಗಳನ್ನು ಹೊರತೆಗೆಯಲಾಯಿತು. ಎಲ್ಲೆಡೆ ಕಿರುಚಾಟ ರಕ್ತ ಹರಿದಿರುವುದು ಕಂಡುಬಂತು’ ಎಂದು ಸ್ಥಳೀಯ ವ್ಯಾಪಾರಿ ಮಹೇಶ್‌ ಶರ್ಮಾ ತಿಳಿಸಿದ್ದಾರೆ.

‘ರಸ್ತೆ ನಂ.14ರಿಂದ ಲೊಹಾ ಮಂಡಿ ಪ್ರದೇಶದತ್ತ ವೇಗವಾಗಿ ಬಂದ ಟಿಪ್ಪರ್‌ ತನ್ನ ದಾರಿಯಲ್ಲಿ ಸಿಕ್ಕ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ 13 ಮಂದಿ ಮೃತಪಟ್ಟಿದ್ದು 10 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಇಲ್ಲಿನ ಎಸ್‌ಎಂಎಸ್‌ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ’ ಎಂದು ಜೈಪುರ ಜಿಲ್ಲಾಧಿಕಾರಿ ಜಿತೇಂದ್ರ ಸೋನಿ ತಿಳಿಸಿದ್ದಾರೆ.‌

ಚಾಲಕ ಅಜಾಗರೂಕತೆಯಿಂದ ಟಿಪ್ಪರ್‌ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ರಾಜೀವ್‌ ಪಛಾರ್‌ ಹೇಳಿದ್ದಾರೆ.

ಟಿಪ್ಪರ್‌ ತಾಸಿಗೆ 100 ಕಿ.ಮೀ ವೇಗದಲ್ಲಿ ಹೋಗಿ ವಾಹನಗಳಿಗೆ ಡಿಕ್ಕಿ ಹೊಡೆದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.