ಹೈದರಾಬಾದ್: ತೆಲಂಗಾಣದ ಶಾಲಾ ಮಕ್ಕಳಿಗಾಗಿ ರೂಪಿಸಿರುವ ‘ಮುಖ್ಯಮಂತ್ರಿಗಳ ಉಪಾಹಾರ ಯೋಜನೆ’ಗೆ ಶುಕ್ರವಾರ ಚಾಲನೆ ನೀಡಲಾಯಿತು.
ಐಟಿ ಸಚಿವ ಕೆ.ಟಿ.ರಾಮ ರಾವ್ ಸೇರಿದಂತೆ ಇತರ ಸಚಿವರು ರಾಜ್ಯದ ವಿವಿಧ ಸ್ಥಳಗಳಲ್ಲಿ ಈ ಯೋಜನೆಗೆ ಚಾಲನೆ ನೀಡಿದರು. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 23 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ.
ಯೋಜನೆಗೆ ಚಾಲನೆ ನೀಡಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಮ ರಾವ್, ‘ರಾಜ್ಯದಲ್ಲಿರುವ 27,147 ಸರ್ಕಾರಿ ಶಾಲೆಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು‘ ಎಂದರು.
‘ಇಡ್ಲಿ ಸಾಂಬಾರ್, ಗೋಧಿ ರವೆಯ ಉಪ್ಪಿಟ್ಟು, ಪೂರಿ–ಆಲೂ ಕೂರ್ಮ, ಟೊಮಾಟೊ ಬಾತ್, ಕಿಚಡಿ, ಸಿರಿಧಾನ್ಯಗಳ ಇಡ್ಲಿ ಹಾಗೂ ಪೊಂಗಲ್ ಸೇರಿದಂತೆ ಪೌಷ್ಟಿಕ ಖಾದ್ಯಗಳನ್ನು ನೀಡಲಾಗುತ್ತದೆ’ ಎಂದು ಹೇಳಿದರು.
‘ಆಹಾರದ ಗುಣಮಟ್ಟವನ್ನು ಕಾಪಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ‘ಯೋಜನೆಯಡಿ ತಯಾರಿಸಲಾಗುವ ಆಹಾರದ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಲಾಗುವುದು’ ಎಂದರು.
1 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಗುಣಮಟ್ಟದ ಉಪಾಹಾರ ನೀಡುವ ಈ ಯೋಜನೆಗೆ ವಿಜಯದಶಮಿ ದಿನವಾದ ಅ.24ರಂದು ಚಾಲನೆ ನೀಡಲು ಸರ್ಕಾರ ಉದ್ದೇಶಿಸಿತ್ತು. ಈಗ, ಅದಕ್ಕೂ ಮುನ್ನವೇ ಚಾಲನೆ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.