ADVERTISEMENT

‘ಜಿಹಾದ್‌’ ಪದ ಬಳಸಿದವರೆಲ್ಲ ಉಗ್ರರಲ್ಲ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:56 IST
Last Updated 21 ಜೂನ್ 2019, 19:56 IST

ಮುಂಬೈ: ‘ಜಿಹಾದ್‌’ ಎಂಬ ಪದ ಬಳಸಿದ ಕಾರಣಕ್ಕೆ ಯಾವುದೇ ವ್ಯಕ್ತಿಯನ್ನು ಭಯೋತ್ಪಾದಕನೆಂದು ಕರೆಯಲಾಗದು ಎಂದು ಮಹಾರಾಷ್ಟ್ರದ ಅಕೋಲದ ನ್ಯಾಯಾಲಯ ಹೇಳಿದೆ.

ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಮೂವರನ್ನು ದೋಷಮುಕ್ತಗೊಳಿಸಿದ ನ್ಯಾಯಾಧೀಶ ಎ.ಎಸ್‌. ಜಾಧವ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಬ್ದುಲ್‌ ರಜಾಕ್‌ (24), ಶೋಯೆಬ್ ಖಾನ್‌ (24) ಮತ್ತು ಸಲೀಂ ಮಲಿಕ್‌ ಆರೋಪಮುಕ್ತಗೊಂಡವರು.

ADVERTISEMENT

2015ರಲ್ಲಿ ಪುಸದ್‌ ಪ್ರದೇಶದ ಮಸೀದಿಯೊಂದರ ಬಳಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಇವರ ಮೇಲೆ ಪ್ರಕರಣ ದಾಖಲಾಗಿತ್ತು.

ಗೋಮಾಂಸ ನಿಷೇಧದ ಸಂದರ್ಭದಲ್ಲಿ ಈ ಕೃತ್ಯ ನಡೆದಿದ್ದು, ಚೂರಿಯಿಂದ ರಜಾಕ್‌ ಇಬ್ಬರು ಪೊಲೀಸರ ಮೇಲೆ ಇರಿದಿದ್ದ ಎಂದು ಸರ್ಕಾರಿ ವಕೀಲರು ಆರೋಪಿಸಿದ್ದರು.

ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆಮುಸ್ಲಿಂ ಯುವಕರನ್ನು ಪ್ರೇರೇಪಿಸುವ ಪಿತೂರಿಯಲ್ಲಿ ಈ ಮೂವರು ಭಾಗಿಯಾಗಿದ್ದರು ಎಂದು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಆರೋಪಿಸಿತ್ತು.

‘ಆರೋಪಿ ರಜಾಕ್‌ ಗೋಮಾಂಸ ನಿಷೇಧದ ವಿರುದ್ಧ ಸರ್ಕಾರ ಹಾಗೂ ಹಿಂದೂ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ’ ಎಂದು ನ್ಯಾಯಾಧೀಶರು ಹೇಳಿದ್ದಾರೆ.

’ಆತ ‘ಜಿಹಾದ್‌’ ಪದವನ್ನು ಬಳಸಿದ್ದಾನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಈ ಪದವನ್ನು ಬಳಸಿದ್ದಾನೆ ಎನ್ನುವ ಕಾರಣಕ್ಕೆ ಆತನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುವುದು ಸರಿಯಲ್ಲ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ಜಿಹಾದ್‌’ ಎಂಬುದು ಅರೇಬಿಕ್‌ ಪದ ಇದಕ್ಕೆ ನಿಘಂಟಿನಲ್ಲಿ ‘ಹೋರಾಟ’ ಎಂಬ ಅರ್ಥ ಇದೆ ಎಂದೂ ನ್ಯಾಯಾಧೀಶರು ಹೇಳಿದ್ದಾರೆ.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ರಜಾಕ್‌ ಈಗಾಗಲೇ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದು, ಈಗ ಆತನನ್ನು ಬಿಡುಗಡೆಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.