ADVERTISEMENT

ಐವರು ಯೋಧರು ಹುತಾತ್ಮ: ಹಂದ್ವಾರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 4 ಮೇ 2020, 2:24 IST
Last Updated 4 ಮೇ 2020, 2:24 IST
ಅಶುತೋಷ್‌ ಶರ್ಮಾ
ಅಶುತೋಷ್‌ ಶರ್ಮಾ   

ಶ್ರೀನಗರ: ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಶನಿವಾರ ರಾತ್ರಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಕರ್ನಲ್‌ ಹಾಗೂ ಮೇಜರ್‌ ಸೇರಿದಂತೆ ಭದ್ರತಾ ಪಡೆಯ ಐವರು ಹುತಾತ್ಮರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.

ಕರ್ನಲ್‌ ಅಶುತೋಷ್‌ ಶರ್ಮಾ, 21– ರಾಷ್ಟ್ರೀಯ ರೈಫಲ್ಸ್‌ನ ಮೇಜರ್‌ ಅನುಜ್‌ ಸೂದ್‌, ನಾಯಕ್‌ ರಾಕೇಶ್‌ಕುಮಾರ್‌, ಲ್ಯಾನ್ಸ್‌ ನಾಯಕ್‌ ದಿನೇಶ್‌ಸಿಂಗ್‌, ಪೊಲೀಸ್‌ ವಿಶೇಷ ಕಾರ್ಯ ಪಡೆಯ ಎಸ್‌ಐ ಶಕೀಲ್‌ ಖಾಜಿ ಹುತಾತ್ಮರಾದವರು.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ರಾಜ್‌ವಾರ್‌ ಅರಣ್ಯ ಪ್ರದೇಶದ ಮನೆಯೊಂದರಲ್ಲಿ ಉಗ್ರರು ಬಚ್ಚಿಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಅಶುತೋಷ್‌ ಶರ್ಮಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಮನೆಯಿಂದ ಪರಾರಿಯಾಗುವ ಯತ್ನದಲ್ಲಿದ್ದ ಉಗ್ರರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಹಾಗೂ ಲಷ್ಕರ್‌–ಎ–ತಯಬಾ ಸಂಘಟನೆಯ ಕಮಾಂಡರ್‌ ಸೇರಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ. ಕಾರ್ಯಾಚರಣೆಯು ಶನಿವಾರ ತಡರಾತ್ರಿವರೆಗೂ ಮುಂದು ವರೆದಿತ್ತು.

ADVERTISEMENT

ಎರಡು ಬಾರಿ ಶೌರ್ಯಪದಕ
ಉಗ್ರರ ವಿರುದ್ಧ ಹೋರಾಡುತ್ತಾ ಪ್ರಾಣ ತ್ಯಾಗ ಮಾಡಿದ ಅಶುತೋಷ್‌ ಶರ್ಮಾ ಅವರು ಎರಡು ಬಾರಿ ಶೌರ್ಯ ಪದಕಕ್ಕೆ ಭಾಜನರಾಗಿದ್ದರು. ಉಗ್ರರು ವಿರುದ್ಧದ ಅನೇಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅವರು ಬಹಳ ವರ್ಷಗಳಿಂದ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಕಮಾಂಡಿಂಗ್‌ ಆಫೀಸರ್ (ಸಿಒ) ಆಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಒಮ್ಮೆ ಉಗ್ರನೊಬ್ಬ ಗ್ರೆನೆಡ್‌ನೊಂದಿಗೆ ಭದ್ರತಾ ಪಡೆಗಳತ್ತ ಧಾವಿಸುತ್ತಿದ್ದುದನ್ನು ದೂರದಿಂದಲೇ ಗ್ರಹಿಸಿ, ಆತನನ್ನು ಗುಂಡಿಟ್ಟು ಕೊಂದಿದ್ದರು.

**

ಕರ್ನಲ್‌ ಹಾಗೂ ಮೇಜರ್‌ ಸೇರಿ ಐವರು ಭದ್ರತಾ ಪಡೆ ಸಿಬ್ಬಂದಿಯ ಹತ್ಯೆಯು ಅತ್ಯಂತ ದುಃಖಕರ ಘಟನೆ. ಹುತಾತ್ಮ ಕುಟುಂಬಗಳ ಜತೆ ದೇಶ ನಿಲ್ಲಲಿದೆ.
-ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

**
ಜೀವಕ್ಕಿಂತ ಸೇವೆಯೇ ಮುಖ್ಯ ಎಂಬ ಧ್ಯೇಯದಂತೆ ಮುನ್ನುಗ್ಗಿ ಉಗ್ರರನ್ನು ಸದೆಬಡಿದ ಕರ್ನಲ್‌ ಅಶುತೋಷ್‌ ಶರ್ಮಾ ಅವರ ನಡೆ ಶ್ಲಾಘನೀಯ.
-ಬಿಪಿನ್‌ ರಾವತ್‌, ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.