ADVERTISEMENT

ಕಾಶ್ಮೀರಿ ಪಂಡಿತ ಹತ್ಯೆ ಪ್ರಕರಣ: ಕಣಿವೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ, ಪ್ರತಿಭಟನೆ

ಜುಲ್ಫಿಕರ್ ಮಜಿದ್
Published 13 ಮೇ 2022, 8:42 IST
Last Updated 13 ಮೇ 2022, 8:42 IST
ಬುದ್ಗಾಂನಲ್ಲಿ ಪ್ರತಿಭಟನೆ – ಪಿಟಿಐ ಚಿತ್ರ
ಬುದ್ಗಾಂನಲ್ಲಿ ಪ್ರತಿಭಟನೆ – ಪಿಟಿಐ ಚಿತ್ರ   

ಶ್ರೀನಗರ: ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರರೊಬ್ಬರನ್ನು ಉಗ್ರನೊಬ್ಬ ಗುರುವಾರ ಹತ್ಯೆ ಮಾಡಿರುವುದು ಆ ಸಮುದಾಯದವರಲ್ಲಿ ವ್ಯಾಪಕ ಆಕ್ರೋಶ, ಸಿಟ್ಟು ಮತ್ತು ಆತಂಕಕ್ಕೆ ಕಾರಣವಾಗಿದೆ.

ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್‌ ಕಚೇರಿಯಲ್ಲಿ 35 ವರ್ಷ ವಯಸ್ಸಿನ ರಾಹುಲ್‌ ಭಟ್‌ ಎಂಬವರನ್ನು ಉಗ್ರನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದ. ಕಾಶ್ಮೀರಿ ಪಂಡಿತ ಸಮುದಾಯದವರಿಗೆ ನೀಡಲಾಗಿರುವ ವಿಶೇಷ ಉದ್ಯೋಗ ಪ್ಯಾಕೇಜ್‌ನಡಿ ರಾಹುಲ್‌ ಭಟ್‌ ಉದ್ಯೋಗಕ್ಕೆ ಸೇರಿದ್ದರು.

ರಾಹುಲ್‌ ಭಟ್‌ ಹತ್ಯೆ ಬೆನ್ನಲ್ಲೇ ಸಮುದಾಯದವರು ಬುದ್ಗಾಂ, ಅನಂತನಾಗ್ ಹಾಗೂ ಬಾರಾಮುಲ್ಲಾಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪಂಡಿತ ಸಮುದಾಯದವರನ್ನು ಗುರಿಯಾಗಿಸಿ ಹತ್ಯೆಗಳು ನಡೆಯುತ್ತಿರುವುದರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಸಮುದಾಯದವರನ್ನು ರಕ್ಷಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಪುನರ್ವಸತಿ ಕಲ್ಪಿಸುತ್ತೇವೆ ಎಂಬುದು ಕೇವಲ ಗಿಮಿಕ್ ಅಷ್ಟೇ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

‘ನಾವು ಹೋರಾಟ ನಡೆಸಲಿದ್ದೇವೆ. ಭಯೋತ್ಪಾದಕರು ಯುದ್ಧ ಸಾರಿದ್ದಾರೆ. ನಾವದನ್ನು ಕೊನೆಗೊಳಿಸಲಿದ್ದೇವೆ. ಸಾಮರಸ್ಯ ಮತ್ತು ಸಮನ್ವಯದ ನೀತಿ ವಿಫಲವಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಸಮನ್ವಯ ಫ್ರಂಟ್‌ (ಜೆಕೆಆರ್‌ಎಫ್) ಅಧ್ಯಕ್ಷ ಸಂದೀಪ್ ಮಾವಾ ಹೇಳಿದ್ದಾರೆ.

ಕಣಿವೆಯಲ್ಲಿ ಮುಗ್ದ ಜನರ ಹತ್ಯೆ ಮಾಡುವವರ ವಿರುದ್ಧ ನಾವೆಲ್ಲ ಜತೆಯಾಗಿ ಹೋರಾಡಬೇಕು ಎಂದು ಅವರು ಮುಸ್ಲಿಮ್, ಸಿಖ್‌ ಹಾಗೂ ಇತರ ಸಮುದಾಯಗಳಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.