ನವದೆಹಲಿ: ‘ಭಯೋತ್ಪಾದನೆ, ವಿಶ್ವವು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದ್ದು, ಉಗ್ರರನ್ನು ಪೋಷಿಸುತ್ತಿರುವ ಹಾಗೂ ಅವರನ್ನು ಬೆಂಬಲಿಸುತ್ತಿರುವ ರಾಷ್ಟ್ರಗಳನ್ನು ಇದಕ್ಕೆ ತಪ್ಪಿತಸ್ಥರನ್ನಾಗಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ಪಾಕಿಸ್ತಾನವನ್ನು ಪ್ರಸ್ತಾಪಿಸಿ ಟೀಕಿಸಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ಮುಖಾಂತರ ‘ಬ್ರಿಕ್ಸ್’ ರಾಷ್ಟ್ರಗಳ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಂಘಟಿತರಾಗಿ, ಯೋಜನಾ ಬದ್ಧವಾಗಿ ಭಯೋತ್ಪಾದನೆ ಸಮಸ್ಯೆಯನ್ನು ತಡೆಗಟ್ಟಬೇಕಾಗಿದೆ’ ಎಂದರು. 12ನೇ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನರೊ, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೊಸಾ ಭಾಗವಹಿಸಿದ್ದರು.
ಬ್ರಿಕ್ಸ್, ವಿಶ್ವದ ಅರ್ಧದಷ್ಟು ಜನರನ್ನು, ಅಂದಾಜು 360 ಕೋಟಿ ಜನರನ್ನು ಪ್ರತಿನಿಧಿಸುತ್ತಿದೆ. ಈ ರಾಷ್ಟ್ರಗಳ ಒಟ್ಟಾರೆ ಜಿಡಿಪಿ 16.6 ಟ್ರಿಲಿಯನ್ ಯುಎಸ್ ಡಾಲರ್ ಆಗಿದೆ. ಭಾಷಣದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ವಿಶ್ವ ವಾಣಿಜ್ಯ ಸಂಸ್ಥೆ, ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಸುಧಾರಣೆಯ ಅಗತ್ಯತೆಯನ್ನು ಮೋದಿ ಉಲ್ಲೇಖಿಸಿದರು. ಜೊತೆಗೆ ಕೋವಿಡ್–19ರ ನಂತರದಲ್ಲಿ ಭಾರತ ತೆಗೆದುಕೊಂಡ ಹೆಜ್ಜೆಗಳ ಬಗ್ಗೆಯೂ ಪ್ರಸ್ತಾಪಿಸಿದರು.
‘ಆತ್ಮನಿರ್ಭರ್ ಭಾರತ’ ಎಂಬ ಹೆಸರಿನಲ್ಲಿ ಭಾರತವು ಹೊಸ ಅಭಿಯಾನವನ್ನು ಆರಂಭಿಸಿದೆ. ಕೋವಿಡ್–19 ಪಿಡುಗಿನ ನಂತರದಲ್ಲಿ ಆತ್ಮನಿರ್ಭರ ಭಾರತವು ಜಾಗತಿಕ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡಲಿದೆ ಎನ್ನುವ ಭರವಸೆಯೊಂದಿಗೆ ಇದನ್ನು ಆರಂಭಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.