
ನವದೆಹಲಿ: ‘ಭಯೋತ್ಪಾದನೆಗೆ ಬಲಿಪಶುವಾದವರನ್ನು ಮತ್ತು ಭಯೋತ್ಪಾದಕರನ್ನು ಸಮಾನವಾಗಿ ನೋಡಲು ಸಾಧ್ಯವಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದರು.
ವಿಶ್ವಸಂಸ್ಥೆಯ 80ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಕಿಸ್ತಾನದ ಹೆಸರು ಉಲ್ಲೇಖಿಸದೆ ವಾಗ್ದಾಳಿ ನಡೆಸಿದ ಅವರು,‘ ಪಹಲ್ಗಾಮ್ ದಾಳಿಯ ಹೊಣೆ ಹೊತ್ತುಕೊಂಡಿರುವ ಲಷ್ಕರ್–ಎ–ತಯಬಾ (ಎಲ್ಇಟಿ) ಮತ್ತು ಅದರ ಅಂಗಸಂಸ್ಥೆ ‘ದಿ ರೆಸಿಸ್ಟನ್ಸ್ ಫ್ರಂಟ್’ (ಟಿಆರ್ಎಫ್) ಅನ್ನು ರಕ್ಷಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸದಸ್ಯ ದೇಶವೊಂದು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದರು.
ಪಹಲ್ಗಾಮ್ ದಾಳಿಯಲ್ಲಿ ‘ಟಿಆರ್ಎಫ್‘ ಪಾತ್ರದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ, ಈ ಉಲ್ಲೇಖವನ್ನು ತೆಗೆದುಹಾಕಲು ಸದಸ್ಯ ದೇಶವೊಂದು ಪ್ರಯತ್ನಿಸುತ್ತಿದೆ’ ಎಂದು ಜೈಶಂಕರ್ ಹೇಳಿದರು.
‘ವಿಶ್ವಸಂಸ್ಥೆಯ ಚರ್ಚೆಗಳು ಈಗ ಹೆಚ್ಚು ಧ್ರುವೀಕರಣಗೊಂಡಿವೆ. ಭಯೋತ್ಪಾದನೆ ಸೇರಿದಂತೆ ಜಾಗತಿಕ ಸವಾಲುಗಳಿಗೆ ಸುಸ್ಥಿರ ಪರಿಹಾರವನ್ನು ಹುಡುಕಬೇಕಾದ ವಿಶ್ವಸಂಸ್ಥೆಯೇ ಬಿಕ್ಕಟ್ಟಿನಲ್ಲಿರುವಂತೆ ಕಾಣುತ್ತದೆ’ ಎಂದೂ ಜೈಶಂಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.