ADVERTISEMENT

ಕರ್ನಾಟಕಕ್ಕೆ ₹348 ಕೋಟಿ: 22 ರಾಜ್ಯಗಳಿಗೆ ₹7,532 ಕೋಟಿ ವಿಕೋಪ ಸ್ಪಂದನೆ ನಿಧಿ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜುಲೈ 2023, 13:03 IST
Last Updated 12 ಜುಲೈ 2023, 13:03 IST
   

ನವದೆಹಲಿ: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ. ಉಕ್ಕಿ ಹರಿಯುತ್ತಿರುವ ನದಿ, ಕೆರೆಕಟ್ಟೆಗಳು, ಭೂಕುಸಿತ, ತಗ್ಗುಪ್ರದೇಶಗಳ ಮುಳುಗಡೆ ಮುಂತಾದ ಮಳೆ ಸಂಬಂಧಿತ ಸಂಕಷ್ಟಕ್ಕೆ ಜನ ಸಿಲುಕಿದ್ದಾರೆ.

ಈ ನಡುವೆ, 22 ರಾಜ್ಯಗಳಿಗೆ ₹7,532 ಕೋಟಿ ಮೊತ್ತದ ರಾಜ್ಯ ವಿಕೋಪ ಸ್ಪಂದನೆ ನಿಧಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಮಹಾರಾಷ್ಟ್ರಕ್ಕೆ ಅತಿ ಹೆಚ್ಚು ₹1,420 ಕೋಟಿ ನೀಡಲಾಗಿದೆ. ಕರ್ನಾಟಕಕ್ಕೆ ₹348 ಕೋಟಿ, ಉತ್ತರ ಪ್ರದೇಶಕ್ಕೆ ₹812 ಕೋಟಿ, ಒಡಿಶಾಕ್ಕೆ ₹707 ಕೋಟಿ, ಬಿಹಾರಕ್ಕೆ ₹624 ಕೋಟಿ ನೀಡಲಾಗಿದೆ.

ADVERTISEMENT

'ಮಳೆಯಿಂದ ದೇಶ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದ ಹಣಕಾಸು ವರ್ಷದಲ್ಲಿ ಬಿಡುಗಡೆಯಾದ ಹಣ ಬಳಕೆಯ ಪ್ರಮಾಣಪತ್ರಕ್ಕೆ ಕಾಯದೇ ಮಾರ್ಗಸೂಚಿಗಳಲ್ಲಿ ವಿನಾಯಿತಿ ನೀಡಿ ಕೂಡಲೇ ಹಣ ಬಿಡುಗಡೆ ಮಾಡಲಾಗಿದೆ’ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ವಿಪತ್ತು ನಿರ್ವಹಣಾ ಕಾಯ್ದೆ, 2005ರ ಸೆಕ್ಷನ್ 48(1)(ಎ) ಅಡಿಯಲ್ಲಿ ಪ್ರತಿ ರಾಜ್ಯದಲ್ಲಿ ರಾಜ್ಯ ವಿಕೋಪ ಸ್ಪಂದನೆ ನಿಧಿ ಸ್ಥಾಪಿಸಲಾಗಿದೆ. ವಿಪತ್ತುಗಳ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಈ ಹಣವನ್ನು ಬಳಸಬಹುದಾಗಿದೆ. ಈಶಾನ್ಯ ಮತ್ತು ಹಿಮಾಲಯದ ತಪ್ಪಲಿನ ರಾಜ್ಯಗಳ ಎಸ್‌ಡಿಆರ್‌ಎಫ್ ನಿಧಿಗೆ ಕೇಂದ್ರ ಶೇ.90ರಷ್ಟು ಹಣ ಒದಗಿಸಿದರೆ, ಇತರೆ ರಾಜ್ಯಗಳಿಗೆ ಶೇ.75ರಷ್ಟು ನಿಧಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.