ADVERTISEMENT

‘ದಿ ವೈರ್‌’: ಪೊಲೀಸರ ಶೋಧದ ರೀತಿಗೆ ‘ಎಡಿಟರ್ಸ್‌ ಗಿಲ್ಡ್‌’ ಬೇಸರ

ಪಿಟಿಐ
Published 2 ನವೆಂಬರ್ 2022, 19:45 IST
Last Updated 2 ನವೆಂಬರ್ 2022, 19:45 IST
.
.   

ನವದೆಹಲಿ: ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರ ದೂರು ಆಧರಿಸಿ ‘ದಿ ವೈರ್’ ಸುದ್ದಿ ಮಾಧ್ಯಮ ಕಚೇರಿ ಮತ್ತು ಸಂಪಾದಕರ ಮನೆಗಳಲ್ಲಿ ದೆಹಲಿ ಪೊಲೀಸರು ಶೋಧ ನಡೆಸಿದ ರೀತಿ ತೀವ್ರ ಬೇಸರ ತರಿಸಿದೆ ಎಂದು ‘ಎಡಿಟರ್ಸ್‌ ಗಿಲ್ಡ್‌’ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.

ಪೊಲೀಸರು ವಿಚಾರಣೆ ಸಲುವಾಗಿ ವಿವಿಧ ಸ್ಥಳಗಳಲ್ಲಿ ತರಾತುರಿಯಲ್ಲಿ ಶೋಧ ನಡೆಸಿದ್ದಾರೆ. ಆದರೆ ಈ ವೇಳೆ ಅವರು ನಡೆದುಕೊಂಡ ರೀತಿ ಸಮಂಜಸಕರವಾಗಿಲ್ಲ ಎಂದು ಗಿಲ್ಡ್‌ ಹೇಳಿಕೆಯಲ್ಲಿ ತಿಳಿಸಿದೆ.

ದಾಖಲಾಗಿರುವ ದೂರಿಗೆ ಸಂಬಂಧಿ ಸಿದಂತೆ ಪೊಲೀಸರು ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲಿ. ಆದರೆ ಪ್ರಜಾಪ್ರಭುತ್ವದ ತತ್ವಗಳನ್ನು ಕಡೆಗಣಿಸಿ, ಬೆದರಿಸುವ ತಂತ್ರಗಳನ್ನು ಅನುಸರಿಸಬೇಡಿ ಎಂದು ಆಗ್ರಹಿಸಿದೆ.

ADVERTISEMENT

‘ಪೊಲೀಸರು ಪತ್ರಕರ್ತರ ಮನೆಗಳು ಮತ್ತು ಕಚೇರಿಯಿಂದ ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಐಪಾಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಎಷ್ಟೇ ವಿನಂತಿಸಿಕೊಂಡರು ಡಿಜಿಟಲ್‌ ಸಾಧನಗಳನ್ನು ಪೊಲೀಸರು ಹಿಂದಿರುಗಿಸಿಲ್ಲ ಎಂದು ದಿ ವೈರ್‌ ಹೇಳಿಕೆ ಯಲ್ಲಿ ತಿಳಿಸಿದೆ’ ಎಂದು ಗಿಲ್ಡ್‌ ಹೇಳಿದೆ.

‘ಇದು ತನಿಖಾ ನಿಯಮಗಳು ಮತ್ತು ಕಾರ್ಯವಿಧಾನಗಳ ಉಲ್ಲಂಘನೆಯಾಗಿದೆ. ಸಂಪಾದಕರು ಮತ್ತು ಪತ್ರಕರ್ತರ ಡಿಜಿಟಲ್‌ ಸಾಧನಗಳಲ್ಲಿ ಹಲವು ವಿಶೇಷ ವರದಿಗಳಿಗೆ ಸಂಬಂಧಿಸಿದಂತೆ ಹಲವು ಸೂಕ್ಷ್ಮ ಮತ್ತು ಗೋಪ್ಯ ಮಾಹಿತಿಗಳು ಇರುತ್ತವೆ. ಮೂಲಗಳ ಬಗ್ಗೆ
ಮಾಹಿತಿ ಇರುತ್ತವೆ’ ಎಂದು ತಿಳಿಸಿದೆ.

ಮಾಳವೀಯ ಅವರ ಕುರಿತು ಮಾಡಿದ ವರದಿಯಲ್ಲಿ ಗಂಭೀರ ಲೋಪಗಳಿರುವುದನ್ನು ‘ದಿ ವೈರ್‌’ ಒಪ್ಪಿಕೊಂಡಿದ್ದು, ತಪ್ಪು ಮಾಹಿತಿ ಆಧರಿಸಿದ ವರದಿಗಳನ್ನು ಅದು ಹಿಂಪಡೆದಿದೆ. ತನಿಖಾ ಸಂಸ್ಥೆಗಳು ತನಿಖಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪತ್ರಿಕೋದ್ಯಮದ ಸೂಕ್ಷ್ಮ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು ಎಂದೂ ಗಿಲ್ಡ್‌ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.