ಮೀರತ್: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ದೊರೆತಿರುವ ಶಿವಲಿಂಗವನ್ನು ಕಾರಂಜಿ ಎನ್ನುವವರಿಗೆ ಭಾರತದಲ್ಲಿರಲು ಹಕ್ಕಿಲ್ಲ ಎಂದು ಉತ್ತರ ಪ್ರದೇಶ ಮಹಿಳಾ ಆಯೋಗದ ಉಪಾಧ್ಯಕ್ಷೆ ಸುಷ್ಮಾ ಸಿಂಗ್ ಹೇಳಿದ್ದಾರೆ.
ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆದ ವಿಡಿಯೊ ಸಮೀಕ್ಷೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ‘ಶಿವಲಿಂಗವನ್ನು ಕಾರಂಜಿ ಎಂದು ಕರೆಯುವವರನ್ನು ಭಾರತೀಯರೆಂದು ಪರಿಗಣಿಸಬೇಕಿಲ್ಲ. ನನ್ನ ಪ್ರಕಾರ, ಅಂಥವರಿಗೆ ಈ ದೇಶದಲ್ಲಿರಲು ಹಕ್ಕಿಲ್ಲ’ ಎಂದು ಹೇಳಿದ್ದಾರೆ.
ಸಮೀಕ್ಷೆ ವೇಳೆ ದೊರೆತಿರುವುದು ಶಿವಲಿಂಗವೇ ಅಥವಾ ಕಾರಂಜಿಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಅಲ್ಲಿರಲಿಲ್ಲ. ಆದರೆ, ಎಲ್ಲೆಲ್ಲಿ ಮಸೀದಿಯ ಸುತ್ತಲೂ ಅಥವಾ ಅದರ ಆವರಣದಲ್ಲಿ ಉತ್ಖನನ ಮಾಡಲಾಗಿದೆಯೋ ಅಲ್ಲೆಲ್ಲ ಶಿವಲಿಂಗ ಮತ್ತು ನಾಗದೇವತೆಗಳ ಕುರುಹು ಪತ್ತೆಯಾಗಿವೆ. ಇತಿಹಾಸ ಏನು ಹೇಳುತ್ತದೆಯೋ ಸಾಮಾಜಿಕ ಮಾಧ್ಯಮಗಳು, ಟಿವಿ ಅದನ್ನು ತೋರಿಸುತ್ತಿವೆ’ ಎಂದು ಹೇಳಿದ್ದಾರೆ.
ಸ್ಥಳೀಯ ನ್ಯಾಯಾಲಯದ ಆದೇಶದ ಪ್ರಕಾರ ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸಿದಾಗ ಶಿವಲಿಂಗ ದೊರೆತಿದೆ ಎಂದು ಹಿಂದು ಬಣದ ಪರ ವಕೀಲರು ಹೇಳಿದ್ದರು. ಆದರೆ, ಇದನ್ನು ಅಲ್ಲಗಳೆದಿದ್ದ ಮಸೀದಿ ಆಡಳಿತ ಮಂಡಳಿಯು, ಅದು ಕಾರಂಜಿ ಎಂದು ಹೇಳಿತ್ತು.
ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಜಾಗಕ್ಕೆ ರಕ್ಷಣೆ ನೀಡಿ ಮತ್ತು ಮುಸ್ಲಿಮರು ಮಸೀದಿಯಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಡಿ ಎಂದು ವಾರಾಣಸಿ ಜಿಲ್ಲಾಡಳಿತಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚನೆ ನೀಡಿತ್ತು.
ಈ ಮಧ್ಯೆ, ಸಮೀಕ್ಷೆ ವೇಳೆ ಮಸೀದಿಯ ಒಳಗೆ ಪತ್ತೆಯಾದದ್ದು ಹಿಂದು ಬಣಗಳ ಪರ ವಕೀಲರು ಪ್ರತಿಪಾದಿಸಿದಂತೆ ಶಿವಲಿಂಗವಲ್ಲ, ಕಾರಂಜಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕೂಡ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.