ADVERTISEMENT

ಮುಂಬೈ ಪೊಲೀಸರಿಗೆ ಕಳಂಕ ತಂದವರು ಈಗ ಕ್ಷಮೆ ಕೇಳಲಿ: ಶೀವಸೇನಾ

ಪಿಟಿಐ
Published 5 ಅಕ್ಟೋಬರ್ 2020, 10:11 IST
Last Updated 5 ಅಕ್ಟೋಬರ್ 2020, 10:11 IST
ಶಿವಸೇನೆ ಚಿನ್ಹೆ
ಶಿವಸೇನೆ ಚಿನ್ಹೆ   

ಮುಂಬೈ: ‘ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ತನಿಖೆಯ ವಿಚಾರದಲ್ಲಿ ಮಹಾರಾಷ್ಟ್ರ ಪೊಲೀಸರ ಕಾರ್ಯಕ್ಷಮತೆ ಪ್ರಶ್ನಿಸಿದ್ದ, ಇಲಾಖೆಯಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದ ರಾಜಕೀಯ ಮುಖಂಡರು ಹಾಗೂ ಸುದ್ದಿ ವಾಹಿನಿಗಳು ಈಗ ಮಹಾರಾಷ್ಟ್ರದ ಕ್ಷಮೆ ಕೇಳಬೇಕು’ ಎಂದು ಶೀವಸೇನಾ ಸೋಮವಾರ ಆಗ್ರಹಿಸಿದೆ.

‘ಸುಶಾಂತ್‌ ಸಾವಿನ ಸತ್ಯ ಕೊನೆಗೂ ಬಹಿರಂಗವಾಗಿದೆ. ಸುದ್ದಿ ವಾಹಿನಿಗಳು ಈ ವಿಷಯದಲ್ಲಿ ಕ‍ಪೋಲಕಲ್ಪಿತ ಕಾರ್ಯಕ್ರಮಗಳನ್ನು ಬಿತ್ತರಿಸುವ ಮೂಲಕ ಮಹಾರಾಷ್ಟ್ರದ ಘನತೆಗೆ ಚ್ಯುತಿ ತರಲು ಪ್ರಯತ್ನಿಸಿವೆ. ಅವರ ವಿರುದ್ಧ ಮಹಾರಾಷ್ಟ್ರ ಸರ್ಕಾರವು ಮಾನಹಾನಿ ಪ್ರಕರಣ ದಾಖಲಿಸಬೇಕು’ ಎಂದುಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ ಒತ್ತಾಯಿಸಲಾಗಿದೆ.

‘ನಟ ಸುಶಾಂತ್ ಅವರದ್ದು ಕೊಲೆಯಲ್ಲ, ಅದು ನೇಣು ಹಾಕಿಕೊಂಡ ಪ್ರಕರಣ. ಆತ್ಮಹತ್ಯೆಯಿಂದಲೇ ಸಾವು ಸಂಭವಿಸಿದೆ’ ಎಂದು ಏಮ್ಸ್‌ನ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುಧೀರ್‌ ಗುಪ್ತಾ ಇತ್ತೀಚೆಗೆ ಹೇಳಿದ್ದರು.

ADVERTISEMENT

‘ಅಂಧ ಭಕ್ತರು ಏಮ್ಸ್‌ ನೀಡಿರುವ ವರದಿಯನ್ನೂ ತಿರಸ್ಕರಿಸುತ್ತಾರೆಯೇ? ನಾಯಿಗಳ ಹಾಗೆ ಅರಚಾಡಿದ ರಾಜಕೀಯ ಮುಖಂಡರು ಹಾಗೂ ಮಾಧ್ಯಮದವರು ಈಗಲಾದರೂ ಬಹಿರಂಗ ಕ್ಷಮೆ ಯಾಚಿಸಲಿ’ ಎಂದೂ ಹೇಳಲಾಗಿದೆ.

‘ಸುಶಾಂತ್‌ ಸಾವಿನ ರಹಸ್ಯ ಬಹಿಂಗವಾಗಲೇಬೇಕು ಎಂದು ಕೇಳಿದ, ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಆ ಮಹಾನಟಿ ಈಗ ಎಲ್ಲಿ ಅಡಗಿ ಕುಳಿತಿದ್ದಾರೆ. ಹಾಥರಸ್‌ನಲ್ಲಿ ದಲಿತ ಯುವತಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಾಗ ಆ ನಟಿ ‘ಗ್ಲಿಸರಿನ್‌’ ಹಾಕಿಕೊಂಡೂ ಎರಡು ಹನಿ ಕಣ್ಣೀರು ಸುರಿಸಲಿಲ್ಲವಲ್ಲ’ ಎಂದು ಕಂಗನಾ ರನೌತ್‌ ಹೆಸರು ಉಲ್ಲೇಖಿಸದೆಯೇ ಟೀಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.