ಝಾನ್ಸಿ: ‘ಉತ್ತರ ಪ್ರದೇಶದ ಕ್ರೈಸ್ತ ಸನ್ಯಾಸಿನಿಗಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಮಾರ್ಚ್ 19ರಂದುರೈಲಿನಲ್ಲಿ ಇಬ್ಬರು ಕ್ರೈಸ್ತ ಸನ್ಯಾಸಿಯರು ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಸ್ಥಳೀಯ ಬಜರಂಗದಳ ಕಾರ್ಯಕರ್ತರು ಝಾನ್ಸಿಯ ರೈಲ್ವೆ ಅಧಿಕಾರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.
‘ಆದರೆ, ಬಜರಂಗದಳದ ಕಾರ್ಯಕರ್ತರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಆಧಾರರಹಿತ ಆರೋಪ ಮಾಡಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ’ ಎಂದು ಪೊಲೀಸರು ತಿಳಿಸಿದರು.
‘ಗುರುವಾರ ರಾತ್ರಿ ಬಜರಂಗ ದಳದ ಕಾರ್ಯಕರ್ತರಾದ ಅಂಚಲ್ ಅರ್ಜಾರಿಯಾ ಮತ್ತು ಪುರುಕೇಶ್ ಅಮರಾಯಾ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ಅಲ್ಲದೇ ಪೊಲೀಸರು ಕ್ರೈಸ್ತ ಸನ್ಯಾಸಿಗಳ ವಿರುದ್ಧ ಸರಿಯಾದ ಕ್ರಮಗೈಕೊಂಡಿಲ್ಲ ಎಂದು ಆರೋಪಿಸಿ, ಬೆದರಿಕೆಯೊಡ್ಡಿದ್ದರು’ ಎಂದು ರೈಲ್ವೆ ಅಧಿಕಾರಿ ನೀಮ್ ಖಾನ್ ಮನ್ಸೂರಿ ಮಾಹಿತಿ ನೀಡಿದರು.
‘ಶಾಂತಿ ಉಲ್ಲಂಘನೆ ಮತ್ತು ಕ್ರೈಸ್ತ ಸನ್ಯಾಸಿಗಳೊಂದಿಗೆ ಕೆಟ್ಟದಾಗಿ ವರ್ತಿಸಿದ ಆರೋಪದಡಿ ಅಂಚಲ್ ಮತ್ತು ಪುರುಕೇಶ್ನನ್ನು ಬಂಧಿಸಲಾಗಿದೆ. ಅಲ್ಲದೆ ಕ್ರೈಸ್ತ ಸನ್ಯಾಸಿನಿಯರ ವಿರುದ್ಧ ದೂರು ನೀಡಿದ್ದ ಅಜಯ್ ಶಂಕರ್ ತಿವಾರಿ ಅವರನ್ನೂ ಬಂಧಿಸಲಾಗಿದೆ’ ಎಂದು ಅವರು ತಿಳಿಸಿದರು.
‘ಈ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ಅವರನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಯಿತು’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.