ADVERTISEMENT

ಲೈಂಗಿಕ ದೌರ್ಜನ್ಯ ಆರೋಪ: ಸಂದೇಶ್‌ಖಾಲಿಗೆ ಮೂವರು ಸಚಿವರ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 13:19 IST
Last Updated 18 ಫೆಬ್ರುವರಿ 2024, 13:19 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಕೋಲ್ಕತ್ತ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪಗಳಿಗೆ ಸಂಬಂಧಿಸಿದಂತೆ ತೀವ್ರ ಪ್ರತಿಭಟನೆಗಳು ನಡೆದಿದ್ದ ಸಂದೇಶ್‌ಖಾಲಿಗೆ ಪಶ್ಚಿಮ ಬಂಗಾಳದ ಮೂವರು ಸಚಿವರು ಭಾನುವಾರ ಭೇಟಿ ನೀಡಿ, ಜನರೊಂದಿಗೆ ಮಾತುಕತೆ ನಡೆಸಿ, ಕುಂದುಕೊರತೆ ಆಲಿಸಿದರು.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಕೆಲವರಿಂದ ತಮ್ಮ ಭೂ ಕಬಳಿಕೆ ಆಗಿದೆ ಎಂದು ಗ್ರಾಮಸ್ಥರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಶಿಬಿರ ತೆರೆದು, ಜನರಿಂದ ಅಹವಾಲು ಸ್ವೀಕರಿಸಿತು.

ADVERTISEMENT

ಮಮತಾ ಬ್ಯಾನರ್ಜಿ ಸಂಪುಟದ ಸಚಿವರಾದ ಪಾರ್ಥ ಭೌಮಿಕ್‌, ಸುಜಿತ್‌ ಬೋಸ್‌ ಮತ್ತು ಬಿರ್ಬಾಹಾ ಹಾಂಸ್ದಾ ಅವರ ನಿಯೋಗವು ಇಲ್ಲಿನ ಕಾಳಿನಗರದಲ್ಲಿ ಜನರೊಂದಿಗೆ ಮಾತುಕತೆ ನಡೆಸಿತು. ಈ ವೇಳೆ ಸಂದೇಶ್‌ಖಾಲಿಯ ಟಿಎಂಸಿ ಶಾಸಕ ಸುಕುಮಾರ್‌ ಮಹತಾ ಅವರೂ ಇದ್ದರು.

‘ಇಲ್ಲಿನ ಜನರು ಮತ್ತು ಪಕ್ಷದ ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಲು ನಾವು ಇಲ್ಲಿಗೆ ಬಂದಿದ್ದೇವೆ’ ಎಂದು ಸಚಿವ ಬೋಸ್‌ ಸುದ್ದಿಗಾರರಿಗೆ ತಿಳಿಸಿದರು.

ಸಂದೇಶ್‌ಖಾಲಿಗೆ ಭೇಟಿ ನೀಡಲು ಬಂದಿದ್ದ ಕೇಂದ್ರ ಸಚಿವರನ್ನು ಒಳಗೊಂಡಿದ್ದ ಬಿಜೆಪಿ ನಿಯೋಗಕ್ಕೆ ಸ್ಥಳೀಯ ಆಡಳಿತ ತಡೆಯೊಡ್ಡಿತ್ತು.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆ ಆರೋಪಗಳು ವ್ಯಕ್ತವಾದ ಬಳಿಕ ಸಂದೇಶ್‌ಖಾಲಿಯ ಗ್ರಾಮಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು. ಇದಾದ ಬಳಿಕ ಇಲ್ಲಿನ 19 ಸ್ಥಳಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.