ಬಂಧನ
(ಸಾಂದರ್ಭಿಕ ಚಿತ್ರ)
ಇಂಫಾಲ: ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಸುಲಿಗೆಯಲ್ಲಿ ತೊಡಗಿದ್ದ ಆರೋಪದಲ್ಲಿ ಮೈತೇಯಿ ತೀವ್ರಗಾಮಿ ಸಂಘಟನೆ ಅರಂಬೈ ತೆಂಗೋಲ್ನ ಮೂವರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಇಂಫಾಲ-ಜಿರೀಬಾಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಣಿಜ್ಯ ವಾಹನಗಳ ಚಾಲಕರಿಂದ ಹಣ ಸುಲಿಗೆ ಮಾಡಿ ಚಲನ್ ನೀಡುತ್ತಿದ್ದ ಆರೋಪದಲ್ಲಿ ಜಿಲ್ಲೆಯ ಕೀತೆಲ್ಮಂಬಿಯಿಂದ ಅವರನ್ನು ಶನಿವಾರ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಂಗ್ಜಮ್ ಜಾರ್ಜ್ ಸಿಂಗ್ (28), ಅಬುಜಮ್ ನರೇಂದ್ರ ಸಿಂಗ್ (21) ಮತ್ತು ವಾಹೆಂಗಬಾಮ್ ಅಮರ್ಜಿತ್ ಸಿಂಗ್ (35) ಬಂಧಿತರು.
ಅವರಿಂದ ಪ್ರಿಂಟರ್, ಒಂಬತ್ತು ಪೇಪರ್ ರೋಲ್ಗಳು, ಎರಡು ವೈರ್ಲೆಸ್ ಸೆಟ್ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಕ್ಚಿಂಗ್, ತೌಬಾಲ್ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಸುಲಿಗೆ, ಕಾರ್ಯಕರ್ತರ ನೇಮಕಾತಿ ಮತ್ತು ಅಪಹರಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ನಿಷೇಧಿತ ಸಂಘಟನೆಯಾದ ಕಂಗ್ಲೇಪಕ್ ಕಮ್ಯುನಿಸ್ಟ್ ಪಕ್ಷದ (ತೈಬಂಗಾನ್ಬಾ) ಸದಸ್ಯನನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಲೀಸಾಂಗ್ಥೆಮ್ ರಾಜೇಶ್ ಸಿಂಗ್ನನ್ನು ಕಾಕ್ಚಿಂಗ್ ಜಿಲ್ಲೆಯ ಲಾಂಗ್ಮೇಡಾಂಗ್ ಮಾಮಾಂಗ್ ಅವಾಂಗ್ ಲೈಕೈ ಪ್ರದೇಶದಲ್ಲಿ ಶನಿವಾರ ಬಂಧಿಸಲಾಗಿದೆ.
ಮತ್ತೊಂದು ಕಾರ್ಯಾಚರಣೆಯಲ್ಲಿ, ನಿಷೇಧಿತ ಸಂಘಟನೆ ಎನ್ಆರ್ಎಫ್ಎಂ ಸದಸ್ಯ ಮೀತ್ರಮ್ ಸೊಮೊರ್ಜಿತ್ ಸಿಂಗ್ನನ್ನು ಇಂಫಾಲ ಪಶ್ಚಿಮ ಜಿಲ್ಲೆಯ ಖುಂಬೋಂಗ್ ಬಜಾರ್ನಲ್ಲಿ ಬಂಧಿಸಲಾಗಿದೆ.
ಆತನಿಂದ ಬಂದೂಕು, ಮದ್ದುಗುಂಡುಗಳು, ಐದು ಮೊಬೈಲ್ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.