ADVERTISEMENT

ಬೇಹುಗಾರಿಕೆ: ಪಾಕಿಸ್ತಾನದ ಮೂವರು ನಾಗರಿಕರಿಗೆ ಕಠಿಣ ಜೈಲು ಶಿಕ್ಷೆ

ಐಎಎನ್ಎಸ್
Published 23 ಫೆಬ್ರುವರಿ 2023, 17:08 IST
Last Updated 23 ಫೆಬ್ರುವರಿ 2023, 17:08 IST
   

ಜೈಪುರ: ಗೂಢಾಚಾರಿಕೆಯಲ್ಲಿ ತೊಡಗಿದ್ದ ಪಾಕಿಸ್ತಾನದ ಮೂವರಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಐಎಸ್‌ಐ ಆದೇಶದ ಮೇರೆಗೆ ಭಾರತಕ್ಕೆ ಬಂದಿದ್ದ ಈ ಮೂವರು, ಜೈಸಲ್ಮೇರ್ ಸೇನಾನೆಲೆಯ ಗೋಪ್ಯ ಮಾಹಿತಿಗಳನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ಕಳುಹಿಸುವ ಕೆಲಸಕ್ಕೆ ನಿಯೋಜನೆಗೊಂಡಿದ್ದರು.

ಬೇರೆ ಬೇರೆ ಜೈಲುಗಳಲ್ಲಿರುವ ಅಪರಾಧಿಗಳಾದ ಗೌರಿಶಂಕರ್, ಪ್ರೇಮಚಂದ್ ಹಾಗೂ ನಂದಲಾಲ್‌ಗೆ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರಲ್ಲಿ ಗೌರಿಶಂಕರ್ ಹಾಗೂ ಪ್ರೇಮಚಂದ್‌ಗೆ ತಲಾ 1 ವರ್ಷ ಮತ್ತು ನಂದಲಾಲ್‌ಗೆ ಎರಡು ವರ್ಷ ಕಠಿಣ ಜೈಲು ಶಿಕ್ಷೆ ಇರಲಿದೆ. ಮೂವರಿಗೂ ತಲಾ ₹10,000 ದಂಡ ವಿಧಿಸಲಾಗಿದೆ.

ADVERTISEMENT

ವಿದೇಶಿಗರ ಕಾಯ್ದೆಯ ಸಂಬಂಧಿತ ಸೆಕ್ಷಷನ್‌ಗಳಡಿ ಅವರು ತಪ್ಪಿತಸ್ಥರೆಂದು ಸಾಬೀತಾಗಿದೆ.

ಪಾಕಿಸ್ತಾನದ ಸಂಘಾರ್ ಜಿಲ್ಲೆಯ ಖಿಪ್ರೊ ಪ್ರದೇಶದ ನಂದಲಾಲ್ ಅಲಿಯಾಸ್ ನಂದು ಮಹಾರಾಜ್, ಐಎಸ್‌ಐ ಸಹಾಯ ಪಡೆದು ಪಾಕಿಸ್ತಾನದ ಪಾಸ್‌ಪೋರ್ಟ್ ಮತ್ತು ವೀಸಾ ಬಳಸಿ ಜೋಧಪುರಕ್ಕೆ ಬಂದಿದ್ದ. ಜೈಸಲ್ಮೇರ್ ಸೇರಿದ ಬಳಿಕ ಸೇನಾನೆಲೆಯ ಗೋಪ್ಯ ಮಾಹಿತಿ ಸಂಗ್ರಹಿಸಿ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ ಎಂದು ಗುಪ್ತಚರ ಎಡಿಜಿಪಿ ಎಸ್. ಸೆಂಗತೀರ್ ಹೇಳಿದ್ದಾರೆ.

ಆಗಸ್ಟ್ 20, 2016ರಂದು ವಿಚಾರಣೆ ಬಳಿಕ ಸಿಐಡಿ ಆತನನ್ನು ಬಂಧಿಸಿತ್ತು ಎಂದೂ ಅವರು ಹೇಳಿದ್ದಾರೆ. ವಿಚಾರಣೆ ಮುಂದುವರಿದಂತೆ ಆತನಿಗೆ ಸಹಾಯ ಮಾಡಿದ್ದ ಗೌರಿಶಂಕರ್ ಮತ್ತು ಪ್ರೇಮಚಂದ್‌ನನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.