
ತ್ರಿಶ್ಶೂರ್: ಇಲ್ಲಿನ ರೈಲು ನಿಲ್ದಾಣದ ದ್ವಿಚಕ್ರ ವಾಹನ ನಿಲುಗಡೆ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಲ್ಲಿ ನಿಲ್ಲಿಸಲಾಗಿದ್ದ ಸುಮಾರು 500ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಇಲ್ಲಿ ಸುಮಾರು 600 ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು ಎನ್ನಲಾಗಿದೆ.
‘ಬೆಳಿಗ್ಗೆ 6.20ರ ಸುಮಾರಿಗೆ ಬೆಂಕಿ ಹತ್ತಿಕೊಂಡಿದೆ. 6.40ಕ್ಕೆ ಅಗ್ನಿ ಶಾಮಕ ಕಚೇರಿಗೆ ಈ ಬಗ್ಗೆ ಕರೆ ಬಂದಿದೆ. 7.45ರ ಹೊತ್ತಿಗೆ ಬೆಂಕಿ ನಂದಿಸಲಾಯಿತು’ ಎಂದು ಅಧಿಕಾರಿಗಳು ಹೇಳಿದರು. ವಾಹನ ನಿಲುಗಡೆ ಗುತ್ತಿಗೆ ಪಡೆದಿದ್ದ ಕಂಪನಿಗೆ ಸೇರಿದ 2 ಮೊಬೈಲ್, ₹10 ಸಾವಿರ ನಗದು ಮತ್ತು ರಶೀದಿ ಮುದ್ರಿಸುವ ಯಂತ್ರವೂ ಸುಟ್ಟು ಹೋಗಿದೆ.
‘ವಿದ್ಯುತ್ ತಂತಿಯಲ್ಲಿ ಹೊತ್ತಿಕೊಂಡಿದ್ದ ಕಿಡಿ ಎರಡು ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದ್ದರಿಂದ ವಾಹನ ನಿಲುಗಡೆ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿತು ಎನ್ನಲಾಗುತ್ತಿದೆ. ಈ ಪ್ರದೇಶವನ್ನು ಟಿನ್ ಶೀಟ್ನಿಂದ ಮುಚ್ಚಲಾಗಿತ್ತು. ಬೆಂಕಿಯ ತಾಪಕ್ಕೆ ಇದು ಕೆಳಗೆ ಬಿದ್ದಿತು. ಇಲ್ಲಿಂದ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ಗಳಿಗೆ ಬೆಂಕಿ ತಗುಲದಂತೆ ಕ್ರಮ ವಹಿಸಲಾಯಿತು’ ಎಂದರು.
‘ವಾಹನ ನಿಲ್ದಾಣದ ಹತ್ತಿರವೇ ರೈಲು ಎಂಜಿನ್ ನಿಲ್ಲಿಸಲಾಗಿತ್ತು. ಇದಕ್ಕೆ ಏನಾದರೂ ಹಾನಿಯಾಗಿದೆಯೇ ಎಂಬುದರ ಕುರಿತು ರೈಲ್ವೆ ಇಲಾಖೆಯು ಯಾವುದೇ ಮಾಹಿತಿ ನೀಡಿಲ್ಲ. ಘಟನೆ ಕುರಿತು ರೈಲ್ವೆ ಇಲಾಖೆಯು ತನಿಖೆ ಆರಂಭಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.