ನವದೆಹಲಿ: ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಯು ಕಾಜಿರಂಗ ರಾಷ್ಟ್ರೀಯ ಉದ್ಯಾನದ ಪ್ರಾಣಿಗಳನ್ನು ಅಪಾಯದಲ್ಲಿ ಸಿಲುಕಿಸಿದೆ. ಉದ್ಯಾನದಿಂದ ತಪ್ಪಿಸಿಕೊಂಡಿರುವ ಹುಲಿಯೊಂದು ಹೆದ್ದಾರಿ ಸಮೀಪದ ಮನೆಯೊಂದರಲ್ಲಿ ವಿಶ್ರಾಂತಿ ಪಡೆಯುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಪ್ರವಾಹದ ಸೆಳೆತದಿಂದ ಪಾರಾಗಿ ಮನೆಯೊಂದಕ್ಕೆ ನುಸುಳಿ ಆಶ್ರಯ ಪಡೆದಿರುವ ಹುಲಿ, ಮಂಚದ ಮೇಲೆ ವಿರಮಿಸುತ್ತಿರುವ ಚಿತ್ರವನ್ನು ದಿ ವೈಲ್ಡ್ ಲೈಫ್ ಟ್ರಸ್ಟ್ ಇಂಡಿಯಾ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಬೆಳಿಗ್ಗೆ 8:30ರ ಸುಮಾರಿಗೆ ಹುಲಿ ಹೆದ್ದಾರಿ ಪಕ್ಕದ ಡಾಬಾದ ಮನೆಯೊಳಗೆ ಪತ್ತೆಯಾಗಿದೆ. ಉದ್ಯಾನದಿಂದ 200 ಮೀಟರ್ ದೂರ ಹಾಗೂ ಕಾರ್ಬಿ ಗುಡ್ಡಗಾಡಿನಿಂದ 500 ಮೀಟರ್ ಅಂತರದಲ್ಲಿ ಹೆದ್ದಾರಿ ಇದೆ. ಇಲ್ಲಿನ ಡಾಬಾದ ಕತ್ತಲ ಕೋಣೆಯೊಂದರಲ್ಲಿ ಹುಲಿ ಆಶ್ರಯ ಪಡೆದಿತ್ತು.
ಕಾಡಿನ ಪ್ರದೇಶ ಡಾಬಾಗೆ ಸಮೀಪದಲ್ಲಿಯೇ ಇದ್ದುದರಿಂದ ಸ್ಥಳೀಯರು ಸಹಾಯದೊಂದಿಗೆ ಪ್ರಾಣಿ ತಜ್ಞರ ತಂಡ ಕಾರ್ಯಾಚರಣೆ ನಡೆಸಿ, ಯಾವುದೇ ಅಪಾಯ ಸಂಭವಿಸದಂತೆ ಸಂಜೆ ವೇಳೆಗೆ ಹುಲಿಯನ್ನು ಕಾಡಿನತ್ತ ಕಳಿಸುವಲ್ಲಿ ಸಫಲರಾಗಿದ್ದಾರೆ.
ಅಸ್ಸಾಂ ಪ್ರವಾಹದಿಂದ ಪ್ರಾಣಿಗಳು ಹಾಗೂ ಲಕ್ಷಾಂತರ ಜನರು ಅಪಾಯದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.