ADVERTISEMENT

ಚುನಾವಣೆಗೆ ಒತ್ತಾಯ: ನಾಳೆ ಚುನಾವಣಾ ಆಯೋಗ ಭೇಟಿಯಾಗಲಿರುವ ಟಿಎಂಸಿ ನಿಯೋಗ

ಏಳು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ, ಉಪಚುನಾವಣೆಗೆ ಟಿಎಂಸಿ ಒತ್ತಾಯ

ಪಿಟಿಐ
Published 14 ಜುಲೈ 2021, 11:50 IST
Last Updated 14 ಜುಲೈ 2021, 11:50 IST
ಟಿಎಂಸಿ ನಾಯಕ ಸುವೇಂದು ಶೇಖರ್ ರೇ(ಬಲಬದಿ)
ಟಿಎಂಸಿ ನಾಯಕ ಸುವೇಂದು ಶೇಖರ್ ರೇ(ಬಲಬದಿ)   

ಕೋಲ್ಕತ್ತ: ‘ಕೋವಿಡ್‌–19’ ಸಾಂಕ್ರಾಮಿಕ ಗಣನೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಾಕಿ ಉಳಿದಿರುವ ಏಳು ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ಮತ್ತು ಉಪ ಚುನಾವಣೆಗಳನ್ನು ನಡೆಸುವಂತೆ ಒತ್ತಾಯಿಸಲು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಿಯೋಗ ಗುರುವಾರ (ಜುಲೈ 15) ನವದೆಹಲಿಯಲ್ಲಿ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಎದುರು ಪರಾಭವಗೊಂಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಈ ಉಪ ಚುನಾವಣೆಗಳು ಮಹತ್ವದ್ದಾಗಿವೆ.

ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದರೆ ನವೆಂಬರ್ 4ರೊಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಟಿಎಂಸಿ ನಾಯಕರು ಉಪಚುನಾವಣೆ ನಡೆಸಲು ಒತ್ತಾಯಿಸುತ್ತಿದ್ದಾರೆ.

ADVERTISEMENT

’ಚುನಾವಣಾ ಆಯೋಗ ಉಪಚುನಾವಣೆಗಳನ್ನು ನಡೆಸಲು ಏಕೆ ವಿಳಂಬ ಮಾಡುತ್ತಿದೆ. ಅದು ಕೊರೊನಾ ಮೂರನೇ ಅಲೆಗಾಗಿ ಕಾಯುತ್ತಿದೆಯೇ? ಉಪಚುನಾವಣೆಯನ್ನು ಆದಷ್ಟು ಬೇಗ ನಡೆಸಬೇಕೆಂದು ನಾವು ಬಯಸುತ್ತೇವೆ’ ಎಂದು ರಾಜ್ಯಸಭೆಯ ಟಿಎಂಸಿ ಸಂಸದ್ಯ ಸುಖೇಂದು ಶೇಖರ್ ರೇ ಒತ್ತಾಯಿಸಿದ್ದಾರೆ.

ಪ್ರಸ್ತುತ ಸಚಿವ ಸಂಪುಟದಲ್ಲಿ ಮಮತಾ ಬ್ಯಾನರ್ಜಿ ಮತ್ತು ಹಣಕಾಸು ಸಚಿವ ಅಮಿತ್ ಮಿತ್ರಾ ಇಬ್ಬರು ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗದೇ ಸಚಿವ ಸ್ಥಾನ ನಿರ್ವಹಿಸುತ್ತಿದ್ದಾರೆ. ಮಿತ್ರಾ ಅವರು ಅನಾರೋಗ್ಯದ ಕಾಣದಿಂದಾಗಿ, ಸಚಿವ ಸ್ಥಾನ ಬಿಟ್ಟುಕೊಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ, ಮಮತಾ ಬ್ಯಾನರ್ಜಿ ಅವರು ವಿಧಾನಸಭೆ ಪ್ರವೇಶಿಸಲು ಉಪಚುನಾವಣೆಯಲ್ಲಿ ಗೆಲ್ಲಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.