ಕೋಲ್ಕತ್ತ: ಪಕ್ಷದ ಬೆಂಬಲಿಗರು ‘ಗೋಲಿ ಮಾರೋ’ ಎಂದು ಘೋಷಣೆ ಕೂಗಿರುವುದರಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಂತರ ಕಾಯ್ದುಕೊಂಡಿದೆ.
ರ್ಯಾಲಿಯೊಂದರ ವೇಳೆ ಕೆಲವು ಟಿಎಂಸಿ ಬೆಂಬಲಿಗರು ‘ಬಂಗಾಳದ ದೇಶದ್ರೋಗಿಗಳಿಗೆ ಗುಂಡಿಕ್ಕಿ’ ಎಂದು ಘೋಷಣೆ ಕೂಗಿದ್ದರು.
ಕೆಲವು ಯುವ ಬೆಂಬಲಿಗರು ‘ಅತಿಯಾದ ಉತ್ಸಾಹ’ದಿಂದ ಹಾಗೆ ಘೋಷಣೆ ಕೂಗಿರಬಹುದು. ಆದರೆ, ಪಕ್ಷವು ಅದನ್ನು ಬೆಂಬಲಿಸುವುದಿಲ್ಲ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
‘ರ್ಯಾಲಿಗಳಲ್ಲಿ ಅಂಥ ಘೋಷಣೆಗಳನ್ನು ಕೂಗಬಾರದು. ಅಂತಹ ಘೋಷಣೆ ಕೂಗಿದ್ದು ಸರಿಯಲ್ಲ. ‘ಗೋಲಿ ಮಾರೋ’ ಎಂಬುದನ್ನು ಕೇವಲ ಆ ಪದದ ಅರ್ಥವಾಗಿಯಷ್ಟೇ ಗಣನೆಗೆ ತೆಗೆದುಕೊಳ್ಳಬಾರದು’ ಎಂದೂ ಅವರು ಹೇಳಿದ್ದಾರೆ.
ದಕ್ಷಿಣ ಕೋಲ್ಕತ್ತದಲ್ಲಿ ಮಂಗಳವಾರ ನಡೆದ ‘ಶಾಂತಿ ರ್ಯಾಲಿ’ಯಲ್ಲಿ ಕೆಲವು ಟಿಎಂಸಿ ಬೆಂಬಲಿಗರು ಘೋಷಣೆ ಕೂಗಿದ್ದರು. ರ್ಯಾಲಿಯಲ್ಲಿ ಟಿಎಂಸಿ ಸರ್ಕಾರದ ಇಬ್ಬರು ಸಚಿವರೂ ಭಾಗವಹಿಸಿದ್ದರು.
2020ರ ಜನವರಿಯಲ್ಲಿ ದೆಹಲಿಯಲ್ಲಿ ಬಿಜೆಪಿ ನಾಯಕರೊಬ್ಬರು ಇಂಥದ್ದೇ (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಘೋಷಣೆ ಕೂಗಿದ್ದು ದೇಶದಾದ್ಯಂತ ಆಕ್ಷೇಪಕ್ಕೆ ಗುರಿಯಾಗಿತ್ತು. ಇತರ ಪ್ರತಿಪಕ್ಷಗಳ ಜತೆಗೆ ಟಿಎಂಸಿಯು ಘೋಷಣೆಯನ್ನು ತೀವ್ರವಾಗಿ ಖಂಡಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.