ಕೋಲ್ಕತ್ತ: ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಶಾಸಕ ವಿಲ್ಸನ್ ಚಂಪರಮರಿ ಅವರ ವಿರುದ್ಧ ಪಕ್ಷದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಿಲ್ಸನ್ ಅವರ ಸೇರ್ಪಡೆಯನ್ನುಅಲಿಪುರದ್ವಾರ ಸಂಸದ ಜಾನ್ ಬರ್ಲಾ ಸೇರಿದಂತೆ ಬಿಜೆಪಿಯ ಬಹುತೇಕ ನಾಯಕರು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
ವಿಲ್ಸನ್ ಅವರು ಶಾಸಕರಾಗಿರುವ ಕಾಲಚೀನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪಕ್ಷದ ನಿರ್ಧಾರ ವಿರೋಧಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ‘ಕ್ಷೇತ್ರದಲ್ಲಿ ವಿಲ್ಸನ್ ವಿರುದ್ಧ ಕೆಲಸ ಮಾಡಿದ್ದ ನಾವು ಬಿಜೆಪಿ ಗೆಲುವಿಗೆ ಯತ್ನಿಸಿದ್ದೆವು. ಈ ಅವರು ಪಕ್ಷ ಸೇರಿದರೆ ಒಪ್ಪಿಕೊಳ್ಳುವುದು ಹೇಗೆ’ ಎಂದು ಬ್ಲಾಕ್ ಅಧ್ಯಕ್ಷ ಜೈಬೀರ್ ಪ್ರಶ್ನಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ನಡೆಸಲು ಶಾಸಕರು ಕುಮ್ಮಕ್ಕು ನೀಡಿದ್ದಾರೆ ಎಂದು ಬರ್ಲಾ ಆರೋಪಿಸಿದ್ದಾರೆ. ಶಾಸಕರ ದುಷ್ಕೃತ್ಯಗಳನ್ನು ಪ್ರಶ್ನಿಸಿದ್ದ ಹಲವು ಬಿಜೆಪಿ ಕಾರ್ಯಕರ್ತರು ಜೈಲಿಗೆ ಹೋಗಿದ್ದಾರೆ ಎಂದಿದ್ದಾರೆ.
ಈ ಬೆಳವಣಿಗೆಗಳು ಪಕ್ಷದ ರಾಜ್ಯ ನಾಯಕರನ್ನು ಎಚ್ಚರಿಸಿದ್ದು, ಪರಿಸ್ಥಿತಿ ನಿಭಾಯಿಸುವಂತೆ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಪ್ರಸಾದ್ ಶರ್ಮಾ ಅವರಿಗೆ ಸೂಚಿಸಿದೆ.
ಈ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಟಿಎಂಸಿ ಶಾಸಕ ಮನಿರುಲ್ ಇಸ್ಲಾಮ್ ವಿರುದ್ಧವೂ ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.