ಕೋಲ್ಕತ್ತ: ರಾಜಕೀಯ ದ್ವೇಷಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡುವುದರ ವಿರುದ್ಧ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಿಲುವಳಿ ಮಂಡಿಸಲು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಚಿಂತನೆ ನಡೆಸಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯ ಮುಂಗಾರು ಅವಧಿಯ ವಿಸ್ತರಿತ ಅಧಿವೇಶನ ಸೆಪ್ಟೆಂಬರ್ 14ರಂದು ಆರಂಭವಾಗಲಿದ್ದು, 22ಕ್ಕೆ ಕೊನೆಗೊಳ್ಳುವ ಸಾಧ್ಯತೆ ಇದೆ.
‘ನಿಲುವಳಿ ಮಂಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈವರೆಗೂ ಯಾವುದೂ ಅಂತಿಮಗೊಂಡಿಲ್ಲ. ಮುಂದಿನ ಕೆಲವು ದಿನಗಳಲ್ಲಿ ನಿರ್ಧಾರಕ್ಕೆ ಬರಲಾಗುವುದು. ಉದ್ಯಮ ಸಲಹಾ ಸಮಿತಿಯ ಮುಂದಿನ ವಾರದ ಸಭೆಯಲ್ಲಿ ಪ್ರಸ್ತಾವ ಮುಂದಿಡಲಾಗುವುದು’ ಎಂದು ಸಚಿವ ಸೋಭಾನದೇವ್ ಚಟ್ಟೋಪಾಧ್ಯಾಯ ಹೇಳಿದ್ದಾರೆ.
‘ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಪ್ರತಿಪಕ್ಷಗಳ ಆಡಳಿತ ಇರುವ ಬೇರೆ ರಾಜ್ಯಗಳಲ್ಲಿಯೂ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ. ತನಿಖಾ ಸಂಸ್ಥೆಗಳು ಬಿಜೆಪಿ ನಾಯಕರ ವಿರುದ್ಧದ ಆರೋಪಗಳ ವಿಚಾರದಲ್ಲಿ ಕುರುಡಾಗಿ ವರ್ತಿಸುತ್ತಿವೆ’ ಎಂದು ಟಿಎಂಸಿ ಶಾಸಕರೊಬ್ಬರು ದೂರಿದ್ದಾರೆ.
ಇಂಥ ಯಾವುದೇ ನಿಲುವಳಿ ಮಂಡಿಸುವುದನ್ನು ವಿರೋಧಿಸುವುದಾಗಿ ಬಿಜೆಪಿ ಪ್ರತಿಕ್ರಿಯಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.