ADVERTISEMENT

ಟಿಎಂಸಿ ಅವರಿಂದ ಪಶ್ಚಿಮ ಬಂಗಾಳ ಮಿನಿ ಪಾಕಿಸ್ತಾನ ಆಗುತ್ತಿದೆ : ತ್ರಿಪುರಾ ಸಿಎಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2022, 9:54 IST
Last Updated 13 ಜೂನ್ 2022, 9:54 IST
ತ್ರಿಪುರಾ ಸಿಎಂ ಮಾಣಿಕ್ ಸಹಾ
ತ್ರಿಪುರಾ ಸಿಎಂ ಮಾಣಿಕ್ ಸಹಾ   

ಗುವಾಹಟಿ: ಪಶ್ಚಿಮ ಬಂಗಾಳವನ್ನು ಅಲ್ಲಿನ ಆಡಳಿತಾರೂಢ ಟಿಎಂಸಿ ಸರ್ಕಾರ ಮಿನಿ ಪಾಕಿಸ್ತಾನವನ್ನಾಗಿ ಮಾಡುತ್ತಿದೆ ಎಂದು ತ್ರಿಪುರಾ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ ಹೇಳಿದ್ದಾರೆ.

ತ್ರಿಪುರ ವಿಧಾನಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಪ್ರಚಾರ ಭಾಷಣದಲ್ಲಿ ಅವರು ಭಾನುವಾರ ಸಂಜೆ ಈ ಆರೋಪ ಮಾಡಿದ್ದಾರೆ.

‘ಈಗಾಗಲೇ ಪಶ್ಚಿಮ ಬಂಗಾಳವನ್ನು ಕಮ್ಯುನಿಸ್ಟ್‌ರು ಹಾಳು ಮಾಡಿದ್ದರು. ಈಗ ಅವರು (ಟಿಎಂಸಿ) ಬಂಗಾಳವನ್ನು ಸಂಪೂರ್ಣವಾಗಿ ದುಃಖದಲ್ಲಿ ಮುಳಗಿಸಿದ್ದಾರೆ. ನೂಪುರ್ ಶರ್ಮಾ ವಿರುದ್ಧದ ಪ್ರತಿಭಟನೆಗಳನ್ನು ಪುಸಲಾಯಿಸುತ್ತಿದ್ದಾರೆ. ಈ ಮೂಲಕ ಬಂಗಾಳವನ್ನು ಮಿನಿ ಪಾಕಿಸ್ತಾನವನ್ನಾಗಿ ಮಾಡಲಾಗುತ್ತಿದೆ‘ ಎಂದಿದ್ದಾರೆ.

ADVERTISEMENT

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 50 ಲಕ್ಷ ಮತಗಳ ಅಂತರದಿಂದ ಟಿಎಂಸಿಯವರು ಸರ್ಕಾರ ರಚಿಸಿದರು. ಶಾಮ್ ಪ್ರಸಾದ್ ಮುಖರ್ಜಿ ಬಂಗಾಳ ಪಾಕಿಸ್ತಾನ ಆಗುವುದು ಬೇಡ ಎಂಬ ದೃಷ್ಟಿಯಿಂದ ಮಾಡಿದ ಪ್ರಯತ್ನ ಬಿಜೆಪಿ ಬಂಗಾಳದಲ್ಲಿ ಇಂದು ಬೆಳೆಯಲು ಕಾರಣವಾಗಿದೆ‘ ಎಂದಿದ್ದಾರೆ.

ರಾಜ್ಯಸಭಾ ಸದಸ್ಯರಾಗಿದ್ದ ಡಾ. ಮಾಣಿಕ್ ಸಹಾ ಅವರು ಬಿಜೆಪಿ ಅಧಿಕಾರ ಇರುವ ತ್ರಿಪುರಾ ರಾಜ್ಯದ ಮುಖ್ಯಮಂತ್ರಿಯಾಗಿ ಕಳೆದ ತಿಂಗಳು ಬಿಪ್ಲವ್ ದೇವ ನಂತರ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಬೊರ್ಡೊವಾಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿದ್ದಾರೆ. ನಾಲ್ಕೂ ಕ್ಷೇತ್ರದ ಉಪ ಚುನಾವಣೆಗೆ ಟಿಎಂಸಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿರುವುದರಿಂದ ಬಿಜೆಪಿಗೆ ಪ್ರಬಲ ಪೈಪೋಟಿ ಎದುರಾಗಿದೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.