ADVERTISEMENT

ಪೆರಿಯಾರ್ ಜನ್ಮದಿನವಾದ ಸೆ.17 ‘ಸಾಮಾಜಿಕ ನ್ಯಾಯದಿನ’: ಸ್ಟಾಲಿನ್‌ ಸರ್ಕಾರ ತೀರ್ಮಾನ

ಪಿಟಿಐ
Published 6 ಸೆಪ್ಟೆಂಬರ್ 2021, 9:57 IST
Last Updated 6 ಸೆಪ್ಟೆಂಬರ್ 2021, 9:57 IST
ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್   

ಚೆನ್ನೈ‌: ಸಮಾಜ ಸುಧಾರಕ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರ ಜನ್ಮದಿನವಾದ ಸೆ.17 ಅನ್ನು ಪ್ರತಿ ವರ್ಷ ರಾಜ್ಯದಾದ್ಯಂತ ‘ಸಾಮಾಜಿಕ ನ್ಯಾಯದಿನ‘ವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೋಮವಾರ ವಿಧಾನಸಭೆಯಲ್ಲಿ ಘೋಷಿಸಿದರು.

‘ಸಾಮಾಜಿಕ ನ್ಯಾಯ, ಸ್ವಾಭಿಮಾನ, ವೈಚಾರಿಕತೆ ಮತ್ತು ಸಮಾನತೆಯ ಅಂಶಗಳನ್ನೊಳಗೊಂಡ ಪೆರಿಯಾರ್‌ ಸಿದ್ದಾಂತವು, ಕಳೆದ ಶತಮಾನದಲ್ಲಿ ತಮಿಳು ಸಮಾಜದ ಬೆಳವಣಿಗೆಗೆ ಅಡಿಪಾಯ ಹಾಕಿತು. ಹಾಗೆಯೇ, ಭವಿಷ್ಯದ ಸಾಮಾಜಿಕ ಬೆಳವಣಿಗೆಯ ಹಾದಿಯನ್ನೂ ಸುಗಮಗೊಳಿಸುತ್ತದೆ‘ ಎಂದು ಹೇಳಿದರು.

ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಬಲವರ್ಧನೆಗೊಳಿಸುವುದಕ್ಕಾಗಿ ಸರ್ಕಾರ ಪ್ರತಿ ವರ್ಷ ಅವರ ಜನ್ಮ ದಿನವನ್ನು ‘ಸಾಮಾಜಿಕ ನ್ಯಾಯ‘ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.

ADVERTISEMENT

‘ಪ್ರತಿ ವರ್ಷ ಪೆರಿಯಾರ್ ಜನ್ಮ ದಿನದಂದು ಮುಖ್ಯ ಕಾರ್ಯದರ್ಶಿಯವರ ಕಚೇರಿಯೂ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿನ ಉದ್ಯೋಗಿಗಳು, ಸಮಾನತೆ, ಸ್ವಾಭಿಮಾನ ಮತ್ತು ವೈಚಾರಿಕತೆ ಒಳಗೊಂಡಂತಹ ಉನ್ನತ ಆದರ್ಶಗಳ ಮೌಲ್ಯಗಳನ್ನು ಅನುಸರಿಸುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ‘ ಎಂದು ಅವರು ಹೇಳಿದರು.

ಇದೇ ವೇಳೆ ಮುಖ್ಯಮಂತ್ರಿ ಸ್ಟಾಲಿನ್‌, ಪೆರಿಯಾರ್‌ ಅವರು (ಸೆ.17, 1879 ರಿಂದ ಡಿ.24, 1973) ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮೊದಲ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.