ರಾಯಪುರ: ‘ಕೋವಿಡ್ ಟೂಲ್ಕಿಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ದಾಖಲಿಸಲು ಮೇ 24ರಂದು ತಮ್ಮ ನಿವಾಸದಲ್ಲಿಯೇ ಇರುವಂತೆ ಬಿಜೆಪಿ ನಾಯಕ ರಮಣ್ ಸಿಂಗ್ ಅವರಿಗೆರಾಯಪುರ ಪೊಲೀಸರು ನೋಟಿಸ್ ನೀಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಛತ್ತೀಸಗಡದ ಸಿವಿಲ್ ಲೈನ್ಸ್ ಠಾಣೆಯ ಅಧಿಕಾರಿ ಈ ನೋಟಿಸ್ ಜಾರಿ ಮಾಡಿದ್ದಾರೆ’ ಎಂದು ಅವರು ಹೇಳಿದರು.
‘ರಮಣ್ ಸಿಂಗ್ ಅವರದ್ದು ಎನ್ನಲಾದ ಟ್ವಿಟರ್ ಖಾತೆಯಿಂದ ಎಐಸಿಸಿ ರಿಸರ್ಚ್ ಪ್ರಾಜೆಕ್ಟ್ ಅಥವಾ ‘ಕಾರ್ನರಿಂಗ್ ನರೇಂದ್ರ ಮೋದಿ ಆ್ಯಂಡ್ ಬಿಜೆಪಿ ಆನ್ ಕೋವಿಡ್ ಮ್ಯಾನೇಜ್ಮೆಂಟ್’ ಎಂಬ ಶೀರ್ಷಿಕೆಯುಳ್ಳ ದಾಖಲೆಯೊಂದನ್ನು ಹಂಚಿಕೊಳ್ಳಲಾಗಿದೆ. ಒಂದು ವೇಳೆ ಈ ಖಾತೆ ರಮಣ್ ಸಿಂಗ್ ಅವರದ್ದೇ ಆಗಿದ್ದಲ್ಲಿ, ಅವರಿಗೆ ಈ ದಾಖಲೆಗಳು ಎಲ್ಲಿಂದ ಸಿಕ್ಕಿವೆ ಎಂಬುದರ ಬಗ್ಗೆ ಪೊಲೀಸರು ರಮಣ್ ಸಿಂಗ್ ಅವರನ್ನು ಪ್ರಶ್ನಿಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.
ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ರಮಣ್ ಸಿಂಗ್ ಸೇರಿದಂತೆ ಇತರರು ಟೂಲ್ಕಿಟ್ ಹೆಸರಿನಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಹಾಗೂ ಜನರ ನಡುವೆ ದ್ವೇಷವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಿಸಿ ಎನ್ಎಸ್ಯುಐದ ಛತ್ತೀಸಗಡ ಘಟಕದ ಅಧ್ಯಕ್ಷ ಆಕಾಶ್ ಶರ್ಮಾ ಈ ಸಂಬಂಧ ದೂರು ನೀಡಿದ್ದರು.
ಈ ದೂರಿನ ಆಧಾರದಲ್ಲಿ ಮೇ 19ರಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.