ನವದೆಹಲಿ(ಪಿಟಿಐ): ರಿಮೋಟ್ ವೋಟಿಂಗ್, ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆ ಮತ್ತು ಎಲ್ಲಾ ಚುನಾವಣೆಗಳಿಗೆ ಏಕರೂಪದ ಮತದಾರರ ಪಟ್ಟಿ ಸೇರಿದಂತೆ ಚುನಾವಣಾ ಸುಧಾರಣೆಗಳ ಕುರಿತು ವಿವರಿಸಲು ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳ ಸಭೆಯನ್ನು ಸಂಸದೀಯ ಸಮಿತಿಯು ಕರೆಯುವ ಸಾಧ್ಯತೆಯಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ನವೆಂಬರ್ ಮೊದಲ ವಾರದಲ್ಲಿ ಚುನಾವಣಾ ಸಮಿತಿಯ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸುವ ಸಾಧ್ಯತೆಯಿದೆ.
ಬಿಜೆಪಿ ಹಿರಿಯ ನಾಯಕ ಸುಶೀಲ್ ಮೋದಿ ನೇತೃತ್ವದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಕಾನೂನು ಹಾಗೂ ನ್ಯಾಯದ ಸಂಸದೀಯ ಸ್ಥಾಯಿ ಸಮಿತಿಯು ಇ-ಕೋರ್ಟ್ಗಳ ವಿಷಯದ ಬಗ್ಗೆ ಚರ್ಚಿಸಲು ನಿರ್ಧರಿಸಿದೆ. ಇ-ಸಮಿತಿಯ ಮುಖ್ಯಸ್ಥರಾಗಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಸಮಯವನ್ನು ಕೇಳಲಿದೆ.
ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿದ ನಂತರ, ಚುನಾವಣಾ ಸಮಿತಿಯ ಉನ್ನತ ಅಧಿಕಾರಿಗಳನ್ನು ಆಹ್ವಾನಿಸಲು ಮತ್ತು ಅವರೊಂದಿಗೆ ಚರ್ಚಿಸಲು ಮೋದಿ ನಿರ್ಧರಿಸಿದ್ದಾರೆ. ತನ್ನ ಕ್ಷೇತ್ರದ ಹೊರಗಿದ್ದವರಿಗೂ ಮತ ಚಲಾಯಿಸಲು ಅನುವು ಮಾಡಿಕೊಡುವ ರಿಮೋಟ್ ಮತದಾನ ಮತ್ತು ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಜೋಡಣೆ, ಮತದಾನಕ್ಕೆ ಹೋಗುವಾಗ ಮತದಾರರು ತೋರಿಸಬೇಕಾದ ಹಲವು ರೀತಿಯ ಗುರುತಿನ ಚೀಟಿಗಳನ್ನು ತೊಡೆದು ಹಾಕಿ ಸರಳಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.