ಮುಂಬೈ: ಲೈಂಗಿಕತೆಯ ಉದ್ದೇಶವಿರದೇ ಮಗುವಿನ ಕೆನ್ನೆಯನ್ನು ಸ್ಪರ್ಶಿಸುವುದನ್ನು ಲೈಂಗಿಕ ದೌರ್ಜನ್ಯ ಎಂಬುದಾಗಿ ಪರಿಗಣಿಸಲಾಗದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಶಿಂಧೆ ಅವರಿರುವ ಏಕಸದಸ್ಯ ನ್ಯಾಯಪೀಠ. ಪ್ರಕರಣದ ಆರೋಪಿಯಾದ 46 ವರ್ಷದ ವ್ಯಕ್ತಿಗೆ ಆ.27ರಂದು ಜಾಮೀನು ಮಂಜೂರು ಮಾಡಿದೆ.
ಠಾಣೆ ಜಿಲ್ಲೆಯ ರಾಬೋಡಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಮಾಂಸ ಮಾರಾಟ ಅಂಗಡಿ ನಡೆಸುತ್ತಿರುವ ಮೊಹಮ್ಮದ್ ಅಹ್ಮದ್ ಉಲ್ಲಾ ಎಂಬುವವರು, ಅಂಗಡಿಗೆ ಬಂದಿದ್ದ 8 ವರ್ಷದ ಬಾಲಕಿಯ ಕೆನ್ನೆ ಸವರಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಸಲ್ಲಿಸಿದ್ದ ದೂರಿನನ್ವಯ ಉಲ್ಲಾ ಅವರನ್ನು ಕಳೆದ ವರ್ಷ ಜುಲೈನಲ್ಲಿ ಬಂಧಿಸಿ, ನವಿಮುಂಬೈನ ತಲೋಜಾ ಜೈಲಿನಲ್ಲಿರಿಸಲಾಗಿತ್ತು.
ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿಂಧೆ, ‘ಲೈಂಗಿಕ ಉದ್ದೇಶವಿಲ್ಲದೇ ಬಾಲಕಿಯ ಕೆನ್ನೆ ಸ್ಪರ್ಶ ಮಾಡಿರುವುದು ಪೋಕ್ಸೊ ಕಾಯ್ದೆಯಡಿ ವಿವರಿಸಿರುವಂತೆ ಲೈಂಗಿಕ ದೌರ್ಜನ್ಯ ಎನಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ನ್ಯಾಯಾಲಯದ ಈ ಅಭಿಪ್ರಾಯ ಈ ಪ್ರಕರಣದ ಆರೋಪಿಗೆ ಜಾಮೀನು ನೀಡುವುದಕ್ಕೆ ಮಾತ್ರ ಅನ್ವಯಿಸುತ್ತದೆ. ಇದು ಆರೋಪಿ ವಿರುದ್ಧದ ತನಿಖೆ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.