
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯಾಪಾರ ಒಪ್ಪಂದವನ್ನು ಬಳಸಿಕೊಂಡು ಭಾರತ–ಪಾಕಿಸ್ತಾನ ಸಂಘರ್ಷ ನಿಲ್ಲಿಸಿದೆ ಎಂದು ಪದೇ ಪದೇ ಹೇಳುತ್ತಿರುವ ವಿಚಾರವಾಗಿ ಕಾಂಗ್ರೆಸ್ ಪಕ್ಷವು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದೆ.
‘ಅಮೆರಿಕದೊಂದಿಗಿನ ಸಂಭಾವ್ಯ ವ್ಯಾಪಾರ ಒಪ್ಪಂದವು ಭಾರತಕ್ಕೆ ಅಗ್ನಿಪರೀಕ್ಷೆಯಾಗಲಿದೆ’ ಎಂದು ಅದು ಹೇಳಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು, ‘ಭಾರತವು 2025ರ ನವೆಂಬರ್ನಲ್ಲಿ ಕ್ವಾಡ್ ಶೃಂಗಸಭೆಯ (ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತ) ಆತಿಥ್ಯ ವಹಿಸಲಿದೆ ಎಂದು ಹೇಳಿದ್ದೆವು. ಅದು ಈಗ ಸಾಕಾರವಾಗುತ್ತಿದೆ’ ಎಂದು ಹೇಳಿದರು.
‘ಈ ಮಧ್ಯೆ ಡೊನಾಲ್ಡ್ ಟ್ರಂಪ್ ಅವರು 57ನೇ ಬಾರಿ, ಆಪರೇಷನ್ ಸಿಂಧೂರ ಹೇಗೆ ಮತ್ತು ಯಾಕೆ ಹಠಾತ್ ನಿಂತಿತು ಎಂದು ಹೇಳಿದ್ದಾರೆ’ ಎಂದರು. ಟ್ರಂಪ್ ಅವರು ತಾವು ‘ವ್ಯಾಪಾರ ಒಪ್ಪಂದವನ್ನು ಬಳಸಿಕೊಂಡು ಭಾರತ–ಪಾಕಿಸ್ತಾನ ಸಂಘರ್ಷ ನಿಲ್ಲಿಸಿದೆ’ ಎಂದು ಹೇಳಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.