ಮುಂಬೈ: ಭಾರಿ ಮಳೆಗೆ ತತ್ತರಿಸಿದ್ದ ವಾಣಿಜ್ಯ ನಗರಿ ಮುಂಬೈನ ಜನಜೀವನಗುರುವಾರ ಯಥಾಸ್ಥಿತಿಗೆ ಮರಳಿದ್ದು, ಸಾರಿಗೆ ಸೇವೆ ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಲ್ಲಿ ಬುಧವಾರ 24 ತಾಸಿನಲ್ಲಿ 256 ಮಿ.ಮೀ. ಮಳೆ ಸುರಿದಿತ್ತು. ಇದರಿಂದಾಗಿ ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿತ್ತು. ಹಲವೆಡೆ ಹಳಿಗಳು ಮುಳುಗಡೆಯಾದ ಕಾರಣ, ಉಪನಗರ ರೈಲು ಸೇವೆಯನ್ನು ಕೇಂದ್ರೀಯ ರೈಲ್ವೆ ಹಾಗೂ ಪಶ್ಚಿಮ ರೈಲ್ವೆಯು ಬುಧವಾರ ಸ್ಥಗಿತಗೊಳಿಸಿತ್ತು.
ಹಲವು ರಸ್ತೆಗಳಲ್ಲಿ ನೀರು ತುಂಬಿದ್ದ ಕಾರಣ ಬಸ್ ಸೇವೆಯೂ ಸ್ಥಗಿತವಾಗಿತ್ತು.ಗುರುವಾರ ಮಳೆ ಪ್ರಮಾಣ ಇಳಿಕೆಯಾಗಿದ್ದು, ಮುಂಬೈ ಉಪನಗರದಲ್ಲಿ ಹಾಗೂ ನವಿಮುಂಬೈನಲ್ಲಿ 100 ಮಿ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಉಪನಗರ ರೈಲು ಸೇವೆಯೂ ಪುನರಾರಂಭಗೊಂಡಿದ್ದು, ಅಗತ್ಯ ಸೇವೆಗಳ ಸಿಬ್ಬಂದಿಗಾಗಿ ವಿಶೇಷ ಉಪನಗರ ರೈಲು ಸೇವೆಯನ್ನೂ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕೇಂದ್ರೀಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಾಜಿ ಸುತಾರ್ ತಿಳಿಸಿದ್ದಾರೆ. ಬಸ್ ಸೇವೆಯೂ ಯಥಾಸ್ಥಿತಿಗೆ ಮರಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.