ADVERTISEMENT

ಕೇರಳ: ಕಾಡಾನೆ ದಾಳಿಗೆ ಮಹಿಳೆ ಸಾವು- 2 ತಿಂಗಳಲ್ಲಿ ಕಾಡಾನೆಗೆ 4ನೇ ಬಲಿ

ಪಿಟಿಐ
Published 28 ಮಾರ್ಚ್ 2024, 15:51 IST
Last Updated 28 ಮಾರ್ಚ್ 2024, 15:51 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ವಯನಾಡ್: ವಯನಾಡ್‌ ಮತ್ತು ಮಲಪ್ಪುರಂ ಜಿಲ್ಲೆಗಳ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಬುಡಕಟ್ಟು ಮಹಿಳೆಯೊಬ್ಬರನ್ನು ಕಾಡಾನೆಯೊಂದು ತುಳಿದು ಕೊಂದಿರುವ ಘಟನೆ ಗುರುವಾರ ನಡೆದಿದೆ. ಇದು ಕೇರಳದಲ್ಲಿ ಕಳೆದ ಎರಡು ತಿಂಗಳಿನಲ್ಲಿ ಕಾಡಾನೆ ದಾಳಿಗೆ ಸಂಭವಿಸಿದ ನಾಲ್ಕನೇ ಸಾವಿನ ಪ್ರಕರಣವಾಗಿದೆ. 

ಘಟನೆಯಲ್ಲಿ ಮೃತ ಮಹಿಳೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿ ಜೇನು ಸಂಗ್ರಹಿಸಲು ಕಾಡಿಗೆ ಹೋಗಿದ್ದ ವೇಳೆ ಪರಪ್ಪನಪಾರಾ ಅರಣ್ಯದಲ್ಲಿ ಘಟನೆ ನಡೆದಿದೆ. 

ಈ ನಡುವೆ ‘ಮಾನವ– ವನ್ಯಜೀವಿ ಸಂಘರ್ಷದ ಘಟನೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ವಯನಾಡ್ ಸಂಸದ ರಾಹುಲ್‌ ಗಾಂಧಿ ವಿಫಲರಾಗಿದ್ದಾರೆ. ರಾಹುಲ್‌ ಗಾಂಧಿ ವಯನಾಡಿಗೆ ಬಂದದ್ದಕ್ಕಿಂತ ಹೆಚ್ಚಾಗಿ ಕಾಡಾನೆಗಳೇ ಬಂದಿವೆ. ಜನರ ಕಷ್ಟಗಳಿಗೆ ಸ್ಪಂದಿಸದೆ ಹೊರರಾಜ್ಯಗಳ ಭೇಟಿಯನ್ನು ಆನಂದಿಸುತ್ತಿದ್ದಾರೆ. ಅವರು ತಮ್ಮ ನಿರ್ಲಕ್ಷಕ್ಕೆ ಉತ್ತರಿಸಲು ಇದು ಉತ್ತಮ ಸಮಯವಾಗಿದೆ’ ಎಂದು ವಯನಾಡಿನ ಬಿಜೆಪಿ ಅಭ್ಯರ್ಥಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್‌ ಆರೋಪಿಸಿದ್ದಾರೆ. ‘ಎಕ್ಸ್‌’ ಖಾತೆಯಲ್ಲಿ ಮಹಿಳೆಯ ಸಾವಿಗೆ ಸಂತಾಪ ಸೂಚಿಸಿದ ಅವರು ರಾಹುಲ್‌ ವಿರುದ್ಧ ಕಿಡಿಕಾರಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.