ADVERTISEMENT

ರಾಜ್ಯಸಭಾ ಸದಸ್ಯತ್ವಕ್ಕೆ ಟಿಎಂಸಿಯ ದಿನೇಶ್ ತ್ರಿವೇದಿ ರಾಜೀನಾಮೆ

ಏಜೆನ್ಸೀಸ್
Published 12 ಫೆಬ್ರುವರಿ 2021, 12:28 IST
Last Updated 12 ಫೆಬ್ರುವರಿ 2021, 12:28 IST
ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ದಿನೇಶ್ ತ್ರಿವೇದಿ
ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ದಿನೇಶ್ ತ್ರಿವೇದಿ   

ನವದೆಹಲಿ: ಟಿಎಂಸಿ ಸಂಸದ ದಿನೇಶ್ ತ್ರಿವೇದಿ ಶುಕ್ರವಾರ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರಕಟಿಸಿದರು. ‘ಪಶ್ಚಿಮ ಬಂಗಾಳದಲ್ಲಿ ಹಿಂಸೆ ತಡೆಗೆ ಏನೂ ಮಾಡಲಾಗುತ್ತಿಲ್ಲ. ನನಗೆ ಇಲ್ಲಿ ಕುಳಿತುಕೊಳ್ಳಲು ಉಸಿರುಗಟ್ಟುವ ಅನುಭವವಾಗುತ್ತಿದೆ’ ಎಂದೂ ರಾಜೀನಾಮೆಗೆ ಕಾರಣ ನೀಡಿದರು.

‘ಹಿಂಸಾತ್ಮಕ ಘಟನೆಗಳನ್ನು ತಡೆಯಲು ಏನೂ ಮಾಡಲಾಗದೇ ಸದನದಲ್ಲಿ ಸುಮ್ಮನೆ ಕುಳಿತು ಕೊಳ್ಳುವುದಕ್ಕಿಂತಲೂ ರಾಜೀನಾಮೆ ನೀಡಿ, ರಾಜ್ಯದಲ್ಲಿ ಜನರ ಜೊತೆ ಸೇರುವುದೇ ಒಳಿತು‘ ಎಂದೂ ಹೇಳಿದರು.

ರಾಜ್ಯಸಭೆ ಪೀಠದಲ್ಲಿದ್ದ ಉಪ ಸಭಾಪತಿ ಹರಿವಂಶ ನಾರಾಯಣ್ ಸಿಂಗ್ ಅವರು, ‘ರಾಜೀನಾಮೆ ಸಲ್ಲಿಸಲು ಕೆಲ ವಿಧಾನವಿದೆ. ನಿಯಮದಂತೆ ಲಿಖಿತವಾಗಿ ಸಭಾಪತಿ ಅವರಿಗೆ ರಾಜೀನಾಮೆ ಸಲ್ಲಿಸಬಹುದು’ ಎಂದು ಹೇಳಿದರು.

ADVERTISEMENT

ತ್ರಿವೇದಿ ಕಳೆದ ಎರಡು ತಿಂಗಳಿಂದ ಪಕ್ಷದ ಜೊತೆಗೆ ಅಂತರ ಕಾಯ್ದುಕೊಂಡಿದ್ದರು. ತ್ರಿವೇದಿ ನಿರ್ಧಾರವನ್ನು ಟೀಕಿಸಿರುವ ಟಿಎಂಸಿ, ಅವರು ಪಕ್ಷ ಮತ್ತು ರಾಜ್ಯದ ಜನರ ವಿಶ್ವಾಸಕ್ಕೆ ವಂಚನೆ ಎಸಗಿದ್ದಾರೆ ಎಂದು ಹೇಳಿದೆ.

ಇನ್ನೊಂದೆಡೆ ರಾಜೀನಾಮೆ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದ್ದು, ‘ತ್ರಿವೇದಿ ಅವರನ್ನು ನಮ್ಮ ಪಕ್ಷ ಸೇರಲು ಸ್ವಾಗತಿಸುತ್ತೇವೆ. ಇದು, ರಾಜ್ಯದಲ್ಲಿ ಟಿಎಂಸಿ ಅಂತ್ಯವಾಗುತ್ತಿರುವ ಸೂಚನೆ’ ಎಂದು ಪ್ರತಿಕ್ರಿಯಿಸಿದೆ.

ಕಳೆದ ತಿಂಗಳಿನಲ್ಲಷ್ಟೇ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಪ್ರಮುಖ ನಾಯಕರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದರು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಅನೇಕ ರಾಜಕೀಯ ಬೆಳಗಣಿಗೆಗಳು ಗರಿಗೆದರಿದ್ದು, ಚುನಾವಣಾ ರಂಗ ಕಾವೇರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.