ADVERTISEMENT

ತ್ರಿವಳಿ ತಲಾಖ್‌ ಕಾಯ್ದೆ ಪ್ರಶ್ನಿಸಿ ‘ಸುಪ್ರೀಂ’ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 20:15 IST
Last Updated 2 ಆಗಸ್ಟ್ 2019, 20:15 IST
   

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ರೂಢಿಯಲ್ಲಿರುವ, ತ್ರಿವಳಿ ತಲಾಖ್‌ ಮೂಲಕ ವಿಚ್ಛೇದನ ಪಡೆಯುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ನೂತನ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಲಾಗಿದೆ.

ಕೇರಳ ಮೂಲದ ಸುನ್ನಿ ಪಂಡಿತರು ಹಾಗೂ ಧಾರ್ಮಿಕ ಬೋಧಕರನ್ನು ಒಳಗೊಂಡ ‘ಸಮಸ್ತ ಕೇರಳ ಜಮೈತ್‌–ಉಲ್‌–ಉಲೇಮಾ’ ಎಂಬ ಸಂಘಟನೆ ಈ ಅರ್ಜಿ ಸಲ್ಲಿಸಿದ್ದು, ನೂತನ ಕಾಯ್ದೆ ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿದೆ.

ಪ್ರಕರಣ ದಾಖಲು: (ಚಂಡೀಗಡ) ದೂರವಾಣಿ ಮೂಲಕ ಪತ್ನಿಗೆ ಮೂರು ಬಾರಿ ತಲಾಖ್‌ ಹೇಳಿದ ಆರೋಪದ ಮೇಲೆ ಹರಿಯಾಣದ ನೂಹ್‌ ಜಿಲ್ಲೆಯ 23 ವರ್ಷದ ವ್ಯಕ್ತಿ ಸಲಾವುದ್ದೀನ್‌ ಎಂಬುವವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಪತ್ನಿ ದೂರು ನೀಡಿದ್ದರು.

ADVERTISEMENT

ತ್ರಿವಳಿ ತಲಾಖ್‌ ಹೇಳುವುದನ್ನು ಶಿಕ್ಷಾರ್ಹ ಅಪರಾಧ ಎಂಬ ನೂತನ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯದಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.

‌ವ್ಯಕ್ತಿ ವಿರುದ್ಧ ಎಫ್ಐಆರ್ ಠಾಣೆ:(ಮಹಾರಾಷ್ಟ್ರ) ವಾಟ್ಸ್‌ಆ್ಯಪ್‌ ಮೂಲಕ ಪತ್ನಿಗೆ ತಲಾಖ್‌ ನೀಡಿದ ಆರೋಪದ ಮೇಲೆ, ಇಲ್ಲಿಗೆ ಸಮೀಪದ ಮುಂಬ್ರಾದಲ್ಲಿ ವ್ಯಕ್ತಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

‘ವರದಕ್ಷಿಣೆ ತರುವಂತೆ ಅತ್ತೆ ಹಾಗೂ ನಾದಿನಿ 2015 ಹಾಗೂ 2018ರಲ್ಲಿ ಕಿರುಕುಳ ನೀಡಿದ್ದರು. ಈಗ ಪತಿ ಫೋನ್‌ ಕರೆ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ತಲಾಖ್‌ ಹೇಳಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿ ಮಧುಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.