ADVERTISEMENT

ತ್ರಿಪುರಾ ಬಿಜೆಪಿ ಉಪಾಧ್ಯಕ್ಷೆ ಮೇಲೆ ಗುಂಪಿನಿಂದ ಹಲ್ಲೆ: ಇಬ್ಬರು ಪೊಲೀಸರಿಗೂ ಗಾಯ

ಪಿಟಿಐ
Published 10 ಜೂನ್ 2022, 2:23 IST
Last Updated 10 ಜೂನ್ 2022, 2:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಗರ್ತಲ: ಬಿಜೆಪಿಯ ತ್ರಿಪುರಾ ಘಟಕದ ಉಪಾಧ್ಯಕ್ಷೆ ಪತಲ್ ಕನ್ಯಾ ಜಮಾತಿಯಾ ಅವರ ಮೇಲೆ ಸೆಪಾಹಿಜಲ ಜಿಲ್ಲೆಯ ಜಂಪೂಯಿಜಲ ಸಮೀಪ ಗುಂಪೊಂದು ಹಲ್ಲೆ ನಡೆಸಿದೆ. ಅದೃಷ್ಟವಶಾತ್, ಅವರು ಅಪಾಯದಿಂದ ಪಾರಾಗಿದ್ದಾರೆ. ಈ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೈಡು ಗೋಮತಿ ಜಿಲ್ಲೆಯಲ್ಲಿ ಇತ್ತೀಚೆಗೆ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸಿದವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ‘ಟಿಪ್‌ರ ಮೊಥಾ’ ಅಧ್ಯಕ್ಷ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ದಾಳಿ ನಡೆದಿದೆ ಎನ್ನಲಾಗದಿದೆ.

ತೈಡು, ಜಂಪೂಯಿಜಾಲ ಹಾಗೂ ಸುತ್ತಲಿನ ಪ್ರದೇಶಗಳು ಬುಡಕಟ್ಟು ಪ್ರಾಬಲ್ಯ ಹೊಂದಿರುವ ಪ್ರದೇಶಗಳಾಗಿವೆ.

ಜಂಪೂಯಿಜಲದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬುಡಕಟ್ಟು ಕಲ್ಯಾಣ ಸಚಿವ ರಾಂಪದ ಜಮಾತಿಯಾ ಹಾಗೂ ಬಿಜೆಪಿ ಸಂಸದ ರೇಬತಿ ತ್ರಿಪುರಾ ಅವರ ಜತೆ ಪತಲ್ ಕನ್ಯಾ ಜಮಾತಿಯಾ ತೆರಳುತ್ತಿದ್ದರು. ಈ ಸಂದರ್ಭದಲ್ಲಿ, ಗುಂಪೊಂದು ಬೆಂಗಾವಲು ಪಡೆ ವಾಹನಗಳನ್ನು ತಡೆಯಲು ಮುಂದಾಗಿದೆ. ಇದೇ ವೇಳೆ ಪತಲ್ ಕನ್ಯಾ ಮೇಲೆ ಹಲ್ಲೆ ನಡೆದಿದೆ ಎಂದು ಇನ್‌ಸ್ಪೆಕ್ಟರ್ ಜನರಲ್ (ಕಾನೂನು ಸುವ್ಯವಸ್ಥೆ) ಅರಿಂದಮ್ ನಾಥ್ ತಿಳಿಸಿದ್ದಾರೆ.

ಗುಂಪಿನಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನ ಇದ್ದರು. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಎರಡು ವಾಹನಗಳಿಗೂ ಹಾನಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

ಹಲ್ಲೆ ನಡೆಯುತ್ತಿದ್ದಂತೆಯೇ ಪತಲ್ ಕನ್ಯಾ ಅವರನ್ನು ಸುತ್ತುವರಿದು ರಕ್ಷಿಸಿದ ಪೊಲೀಸರು ಅವರನ್ನು ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್‌ಆರ್) ಪ್ರಧಾನ ಕಚೇರಿಗೆ ಕರೆದೊಯ್ದರು. ಬಳಿಕ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು ಎಂದು ಅವರು ಹೇಳಿದ್ದಾರೆ.

ಇತ್ತೀಚೆಗಷ್ಟೇ ಪತಲ್ ಕನ್ಯಾ ಅವರು ತ್ರಿಪುರಾ ಪೀಪಲ್ಸ್ ಫ್ರಂಟ್ ತೊರೆದು ಬಿಜೆಪಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.