
ಚೆನ್ನೈ: ‘ತಮಿಳಿಗ ವೆಟ್ರಿ ಕಳಗಂ’ ಪಕ್ಷದ ಸ್ಥಾಪಕ, ನಟ ವಿಜಯ್ ಅವರಿಗೆ ರಾಜಕೀಯದ ಅನುಭವ ಕಡಿಮೆ ಇದೆ. ಅವರು ತಮ್ಮ ಕುಟುಂಬದ ಬಗ್ಗೆ ಗಮನ ನೀಡಬೇಕು. ಜತೆಗೆ, ತ್ರಿಷಾ ಅವರ ಗುಂಗಿನಿಂದ ಹೊರಬರಬೇಕು’ ಎಂದು ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಅವರು ಹೇಳಿದ್ದಾರೆ.
ಸದ್ಯ ಈ ಹೇಳಿಕೆ ವಿವಾದ ಸೃಷ್ಟಿಸಿದ್ದು, ನಟಿ ತ್ರಿಷಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಜಕೀಯದಲ್ಲಿ ವಿಜಯ್ ಜತೆಗೆ ತಮ್ಮ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ತ್ರಿಷಾ ವಕೀಲರ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ತಮಿಳುನಾಡಿನ ತಿರುನೆಲ್ವೇಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ನಾಗೇಂದ್ರನ್ ಅವರು ತಮಿಳುನಾಡಿನ ರಾಜಕೀಯದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಹೀಗಿದ್ದವರು ಈ ರೀತಿಯ ಅಸಹ್ಯ ಮತ್ತು ಅನುಚಿತ ಮಾತುಗಳನ್ನು ಆಡಬಾರದು’ ಎಂದಿದ್ದಾರೆ.
ಈ ಕುರಿತು ನಟಿ ವಕೀಲರ ಮೂಲಕ ಹೇಳಿಕೆ ಹೊರಡಿಸಿದ್ದು, ‘ತ್ರಿಷಾ ಅವರು ಹಿಂದಿನಿಂದ ಮಾತ್ರವಲ್ಲದೆ ಈಗಲೂ ರಾಜಕೀಯದಲ್ಲಿ ತಟಸ್ಥ ನಿಲುವನ್ನು ಕಾಯ್ದುಕೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ರಾಜಕೀಯ ಕ್ಷೇತ್ರಕ್ಕಿಂತ ಹೆಚ್ಚಾಗಿ ವೃತ್ತಿಪರ ಕೆಲಸದಲ್ಲಿ ಮಾತ್ರ ಅವರ ಹೆಸರನ್ನು ಉಲ್ಲೇಖಿಸಲು ಬಯಸುತ್ತಾರೆ. ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವವರು ಜವಾಬ್ದಾರಿಯುತವಾಗಿ ವರ್ತಿಸಬೇಕು ಜತೆಗೆ ಸಮಚಿತ್ತವನ್ನು ಕಾಪಾಡಿಕೊಳ್ಳಬೇಕು. ವೈಯಕ್ತಿಕ ಜೀವನವು ಸಾರ್ವಜನಿಕ ಚರ್ಚೆಯ ವಿಷಯವಾಗಿರಬಾರದು’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ನಟ ವಿಜಯ್ ಅವರು ತಮ್ಮ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೂಲಕ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ಆರಂಭಿಸಿದ್ದಾರೆ. ವಿಜಯ್ ಬಗ್ಗೆ ಮಾತನಾಡುವಾಗ ಬಿಜೆಪಿ ನಾಯಕ ನಾಗೇಂದ್ರನ್, ‘ರಾಜಕೀಯ ಅನುಭವ ಕಡಿಮೆ ಇರುವ ವಿಜಯ್ ಅವರು ತ್ರಿಷಾ ಅವರ ಗುಂಗಿನಿಂದ ಹೊರಬರಬೇಕು, ಆಗ ಮಾತ್ರ ಏನಾದರೂ ಮಾಡಲು ಸಾಧ್ಯ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.