ADVERTISEMENT

BJP ಜತೆ ಮೈತ್ರಿಯಿಂದ AIADMK ನೈಜ ಕಾರ್ಯಕರ್ತರಲ್ಲಿ ಅಸಮಾಧಾನ: ಸ್ಟಾಲಿನ್

ಪಿಟಿಐ
Published 3 ಆಗಸ್ಟ್ 2025, 6:25 IST
Last Updated 3 ಆಗಸ್ಟ್ 2025, 6:25 IST
<div class="paragraphs"><p>ಎಂ.ಕೆ. ಸ್ಟಾಲಿನ್ </p></div>

ಎಂ.ಕೆ. ಸ್ಟಾಲಿನ್

   

ಚೆನ್ನೈ: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಪ್ರತಿಪಕ್ಷ ಎಐಎಡಿಎಂಕೆ ರಾಜ್ಯಕ್ಕೆ ದ್ರೋಹ ಬಗೆದಿದೆ ಎಂದು ಆರೋಪಿಸಿರುವ ಡಿಎಂಕೆ ಮುಖ್ಯಸ್ಥ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಈ ನಿರ್ಧಾರದಿಂದ ಆ ಪಕ್ಷದ ನೈಜ ಕಾರ್ಯಕರ್ತರೂ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಏಳನೇ ಪುಣ್ಯತಿಥಿ ಅಂಗವಾಗಿ ಪಕ್ಷದ ಕಾರ್ಯಕರ್ತರಿಗೆ ಸ್ಟಾಲಿನ್‌ ಪತ್ರ ಬರೆದಿದ್ದಾರೆ. ಈ ವೇಳೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

‘ನಮ್ಮ ತಂದೆಯಂತೆ ಈಗಿನ ನಮ್ಮ ಸರ್ಕಾರವು ತಮಿಳುನಾಡು ಮತ್ತು ಅದರ ಜನರ ಹಕ್ಕುಗಳನ್ನು ಖಚಿತಪಡಿಸಿಕೊಳ್ಳುವ ಮಾರ್ಗದಲ್ಲಿಯೇ ಹೆಜ್ಜೆಹಾಕುತ್ತಿದೆ’ ಎಂದಿದ್ದಾರೆ.

ಇದೇ ವೇಳೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸ್ಟಾಲಿನ್‌, ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಚುನಾಯಿತ ಸರ್ಕಾರಗಳ ವಿರುದ್ಧ ಬಿಜೆಪಿ ಸೇಡು ತೀರಿಸಿಕೊಳ್ಳಲು ಯತ್ನಿಸಿತ್ತು ಎಂದು ಆರೋಪಿಸಿದ್ದಾರೆ.

ಆದರೆ, ಮಸೂದೆಗಳನ್ನು ಅಂಗೀಕರಿಸದ ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ ಮಾಡುವ ಮೂಲಕ ನಾವು ಯಶಸ್ಸಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.

ಇಂತಹ ಹೋರಾಟಗಳಿಗೆ ಬೆಂಬಲ ಕೊಡಬೇಕಾದ ಸಮಯದಲ್ಲಿ ರಾಜ್ಯಕ್ಕೆ ದ್ರೋಹ ಬಗೆದ ಬಿಜೆಪಿಯೊಂದಿಗೆ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಸೈದ್ಧಾಂತಿಕ ಬದ್ಧತೆಯಿಲ್ಲದ ಅದರ(ಎಐಎಡಿಎಂಕೆ) ನಾಯಕ ಪಳನಿಸ್ವಾಮಿ ದೆಹಲಿಯವರೆಗೆ ಹೋಗಿ ಬಿಜೆಪಿ ಮುಂದೆ ಮಂಡಿಯೂರಿ ಮೈತ್ರಿ ಮಾಡಿಕೊಂಡರು. ನಿಜವಾದ ಎಐಎಡಿಎಂಕೆ ಕಾರ್ಯಕರ್ತರು ಕೂಡ ಇದರಿಂದ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.