ADVERTISEMENT

2004 ರಿಂದ 2014ರ ಅವಧಿಯಲ್ಲಿ ಹಗರಣಗಳದ್ದೇ ಸದ್ದು: ಪ್ರಧಾನಿ ಮೋದಿ ಟೀಕೆ

ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ

ಪಿಟಿಐ
Published 8 ಫೆಬ್ರುವರಿ 2023, 17:08 IST
Last Updated 8 ಫೆಬ್ರುವರಿ 2023, 17:08 IST
ಲೋಕಸಭೆಯಲ್ಲಿ ಮಾತನಾಡಿದ ಮೋದಿ (ಬಲ). ಅವರ ಭಾಷಣ ಆಲಿಸಿದ ರಾಹುಲ್‌ ಗಾಂಧಿ–ಪಿಟಿಐ ಚಿತ್ರ 
ಲೋಕಸಭೆಯಲ್ಲಿ ಮಾತನಾಡಿದ ಮೋದಿ (ಬಲ). ಅವರ ಭಾಷಣ ಆಲಿಸಿದ ರಾಹುಲ್‌ ಗಾಂಧಿ–ಪಿಟಿಐ ಚಿತ್ರ    

ನವದೆಹಲಿ: ‘2004 ರಿಂದ 2014ರ ಅವಧಿಯಲ್ಲಿ ಹಗರಣಗಳೇ ಸದ್ದುಮಾಡಿದವು. ರಾಷ್ಟ್ರದ ಹಲವೆಡೆ ಉಗ್ರರ ದಾಳಿಗಳು ನಡೆದವು. ಆ ದಶಕವು ದೇಶಕ್ಕೆ ಹೊರೆಯಾಗಿ ಪರಿಣಮಿಸಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುಪಿಎ ಸರ್ಕಾರದ 10 ವರ್ಷಗಳ ಆಡಳಿತವನ್ನು ಟೀಕಿಸಿದ್ದಾರೆ.

ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ ವೇಳೆ ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ವಿಡಂಬನಾಕಾರ ಕಾಕಾ ಹತ್ರಾಸಿ ಹಾಗೂ ಕವಿ ದುಷ್ಯಂತ್‌ಕುಮಾರ್‌ ಅವರ ಪದ್ಯಗಳನ್ನು ಉಲ್ಲೇಖಿಸಿ ವಿರೋಧ ಪಕ್ಷಗಳ ಕಾಲೆಳೆದಿದ್ದಾರೆ.

‘2008ರ ಮುಂಬೈ ದಾಳಿಯನ್ನು ಯಾರೂ ಮರೆಯುವುದಿಲ್ಲ. ಆಗ ಆಡಳಿತದಲ್ಲಿದ್ದ ಸರ್ಕಾರವು ಭಯೋತ್ಪಾದನೆ ವಿರುದ್ಧ ದಿಟ್ಟ ನಿರ್ಧಾರ ಕೈಗೊಳ್ಳಲು ವಿಫಲವಾಗಿತ್ತು. ಹೀಗಾಗಿ ಈ ದೇಶದ ಮುಗ್ಧ ನಾಗರಿಕರು ಜೀವ ಕಳೆದುಕೊಳ್ಳಬೇಕಾಯಿತು’ ಎಂದು ಕಿಡಿಕಾರಿದ್ದಾರೆ.

ADVERTISEMENT

‘ಕೋವಿಡ್‌ ಪಿಡುಗು ಹಾಗೂ ಸಂಘರ್ಷಗಳಿಂದಾಗಿ ವಿಶ್ವದ ಕೆಲವೆಡೆ ಅಸ್ಥಿರತೆ ಸೃಷ್ಟಿಯಾಗಿದೆ. ಇಂತಹ ಸಂದಿಗ್ಧತೆ ನಡುವೆಯೂ ಇಡೀ ಜಗತ್ತು ಭಾರತದತ್ತ ಭರವಸೆಯ ಕಣ್ಣಿನಿಂದ ನೋಡುತ್ತಿದೆ. ಹತಾಶೆಗೆ ಒಳಗಾಗಿರುವ ಕೆಲವರಿಗೆ ರಾಷ್ಟ್ರದ ಬೆಳವಣಿಗೆಯನ್ನು ಸಹಿಸಲು ಆಗುತ್ತಿಲ್ಲ. ದೇಶದ 140 ಕೋಟಿ ಜನರ ಸಾಧನೆಯನ್ನೂ ಅವರಿಂದ ನೋಡಲಾಗುತ್ತಿಲ್ಲ’ ಎಂದೂ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

‘ಸಂಕಷ್ಟದ ಸಮಯದಲ್ಲಿ ಮೋದಿ ತಮ್ಮ ನೆರವಿಗೆ ನಿಂತಿದ್ದಾರೆ ಎಂಬುದು ಈ ದೇಶದ ನಾಗರಿಕರಿಗೆ ಗೊತ್ತು. ಅಂತಹ ಜನ ನೀವು ನನ್ನ ವಿರುದ್ಧ ಮಾಡುತ್ತಿರುವ ಟೀಕೆ ಹಾಗೂ ನಿಂದನೆಯನ್ನು ಹೇಗೆ ಒಪ್ಪುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

‘ದಿನಪತ್ರಿಕೆಗಳಲ್ಲಿನ ಹೆಡ್‌ಲೈನ್‌ಗಳು ಅಥವಾ ಟಿ.ವಿಗಳಲ್ಲಿ ಬಿತ್ತರವಾಗುವ ದೃಶ್ಯಗಳನ್ನು ನೋಡಿ ಜನರು ಮೋದಿ ಮೇಲೆ ನಂಬಿಕೆ ಇಟ್ಟಿಲ್ಲ. ಬದಲಾಗಿ ಸಮರ್ಪಣಾ ಭಾವವನ್ನು ಕಂಡು ನನ್ನ ಮೇಲೆ ಭರವಸೆ ಇಟ್ಟಿದ್ದಾರೆ. ಚುನಾವಣೆಯಲ್ಲಿ ಸೋತಾಗ ಇವಿಎಂ ಅನ್ನು ದೂಷಿಸುತ್ತೀರಿ. ಚುನಾವಣಾ ಆಯೋಗವನ್ನು ಟೀಕಿಸುತ್ತೀರಿ. ಸುಪ್ರೀಂ ಕೋರ್ಟ್‌ ನಿಮ್ಮ ಪರವಾಗಿ ತೀರ್ಪು ನೀಡದಿದ್ದಾಗ ಅದರ ವಿರುದ್ಧ ಹರಿಹಾಯುತ್ತೀರಿ. ಭ್ರಷ್ಟಾಚಾರದ ಕುರಿತು ತನಿಖೆ ಕೈಗೊಂಡರೆ ತನಿಖಾ ಸಂಸ್ಥೆಗಳನ್ನೇ ದೂರುತ್ತೀರಿ. ಸೇನೆ ವಿರುದ್ಧವೂ ಆರೋಪಗಳನ್ನು ಮಾಡುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೋಟ್ಯಂತರ ಜನರ ನಂಬಿಕೆಯೇ ನನಗೆ ಶ್ರೀರಕ್ಷೆ. ವಿರೋಧ ಪಕ್ಷಗಳ ನಿಂದನೆಯು ಈ ರಕ್ಷಾ ಕವಚವನ್ನು ಭೇದಿಸದು. ವಿರೋಧ ಪಕ್ಷದವರು ರಚನಾತ್ಮಕ ಟೀಕೆಯ ಬದಲು ನಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಲೇ ಒಂಬತ್ತು ವರ್ಷಗಳನ್ನು ಕಳೆದಿದ್ದಾರೆ’ ಎಂದೂ ಹೇಳಿದ್ದಾರೆ.

ಈ ವೇಳೆ ಪ್ರಧಾನಿ ಅವರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದ ಬಿಆರ್‌ಎಸ್‌, ಎಡ ಪಕ್ಷ ಹಾಗೂ ಕಾಂಗ್ರೆಸ್‌ನ ಕೆಲ ಸದಸ್ಯರು ಘೋಷಣೆ ಕೂಗುತ್ತಾ ಸದನದಿಂದ ಹೊರನಡೆದರು.

**

ಮೋದಿಯಿಂದ ಅದಾನಿ ರಕ್ಷಣೆ: ರಾಹುಲ್‌

ನವದೆಹಲಿ (ಪಿಟಿಐ): ‘ಅದಾನಿ ಸಮೂಹದ ವಿರುದ್ಧ ಗಂಭೀರ ಆರೋಪ ಕೇಳಿಬಂದರೂ ಪ್ರಧಾನಿ ಮೋದಿ ಅವರು ತನಿಖೆಗೆ ಆದೇಶಿಸಿಲ್ಲ. ಅವರು ಅದಾನಿಯನ್ನು ರಕ್ಷಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದೂರಿದ್ದಾರೆ.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅದಾನಿ ಸಮೂಹದ ವಿರುದ್ಧ ತನಿಖೆ ಕೈಗೊಳ್ಳುವ ವಿಚಾರವನ್ನು ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲೇ ಇಲ್ಲ. ಅವರು ಅದಾನಿಯನ್ನು ರಕ್ಷಿಸುತ್ತಿರುವುದು ಸ್ಪಷ್ಟ. ಅದು ನನಗೂ ಅರ್ಥವಾಗುತ್ತದೆ. ಅದಕ್ಕೆ ಕಾರಣಗಳೂ ಇವೆ’ ಎಂದಿದ್ದಾರೆ.

‘ಪ್ರಧಾನಿಯವರು ಆಘಾತಕ್ಕೊಳಗಾದಂತಿದೆ. ನಾನು ಕ್ಲಿಷ್ಟಕರ ಪ್ರಶ್ನೆಗಳನ್ನೇನೂ ಅವರ ಮುಂದೆ ಇಟ್ಟಿರಲಿಲ್ಲ. ಅದಾನಿ ಎಷ್ಟು ಬಾರಿ ನಿಮ್ಮ ಜೊತೆ ಪ್ರಯಾಣ ಬೆಳೆಸಿದ್ದರು, ಎಷ್ಟು ಬಾರಿ ನಿಮ್ಮನ್ನು ಭೇಟಿಯಾಗಿದ್ದರು ಎಂಬುದನ್ನಷ್ಟೇ ಕೇಳಿದ್ದೆ. ಅದಕ್ಕೂ ಅವರಿಂದ ಉತ್ತರ ದೊರೆತಿಲ್ಲ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.