ತಿರುಪತಿ (ಪಿಟಿಐ): ಭಕ್ತರು ದೇವಸ್ಥಾನದ ಸೇವೆ ಹಾಗೂ ಸೌಕರ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತವು ವೆಂಕಟೇಶ್ವರ ದೇಗುಲದಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನ ಪರಿಚಯಿಸಲು ಮುಂದಾಗಿದೆ.
‘ಟಿಟಿಡಿಯು ವೈಕುಠಂ–2 ಹಾಗೂ ‘ಎಎಂಎಸ್’ ವ್ಯವಸ್ಥೆಯಲ್ಲಿ ಮಾರ್ಚ್ 1ರಿಂದ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಪರಿಚಯಿಸಲು ಸಿದ್ಧತೆ ನಡೆಸಿದೆ’ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
‘ಹಿಂದೆ ದರ್ಶನಕ್ಕೆ ಬರುವ ಭಕ್ತರನ್ನು ಅವರ ಆಧಾರ್ ಕಾರ್ಡ್ ಪರಿಶೀಲಿಸಿ, ವೈಯಕ್ತಿಕ ವಿವರಗಳನ್ನು ನಮೂದಿಸಿಕೊಂಡು ಒಳಗೆ ಬಿಡಲಾಗುತ್ತಿತ್ತು. ಇದು ತ್ರಾಸದಾಯಕ ಕೆಲಸವಾಗಿತ್ತು. ಮುಖ ಗುರುತಿಸುವಿಕೆ ತಂತ್ರಜ್ಞಾನದಿಂದಾಗಿ ಭಕ್ತರ ತಪಾಸಣೆ ಕಾರ್ಯ ಸುಲಭವಾಗಲಿದೆ. ಲಡ್ಡು ಪ್ರಸಾದ ವಿತರಣೆ, ಕೊಠಡಿಗಳ ಹಂಚಿಕೆ ಸೇರಿದಂತೆ ಇತರೆ ಕಾರ್ಯಗಳಲ್ಲಿ ಪಾರದರ್ಶಕತೆ ತರಬಹುದು’ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ದತ್ತಾಂಶವನ್ನು ಸಂಗ್ರಹಿಸಿಡಲಾಗಿರುತ್ತದೆ. ಇನ್ನು ಮುಂದೆ ಮುಖ ಗುರುತಿಸುವಿಕೆ ತಂತ್ರಜ್ಞಾನಕ್ಕೆ ಒಳಪಟ್ಟ ಭಕ್ತರ ದತ್ತಾಂಶವು ಈಗಾಗಲೇ ಸಂಗ್ರಹಿಸಿಟ್ಟಿರುವ ದತ್ತಾಂಶಕ್ಕೆ ಹೋಲಿಕೆಯಾಗಬೇಕು. ಆಗ ಮಾತ್ರ ಅವರಿಗೆ ಕೊಠಡಿ ಹಂಚಿಕೆ ಮಾಡಲಾಗುತ್ತದೆ. ಹೊಸ ತಂತ್ರಜ್ಞಾನದಿಂದಾಗಿ ಲಡ್ಡು ಪ್ರಸಾದ ವಿತರಣೆಯಲ್ಲಿ ಆಗುತ್ತಿರುವ ಅಕ್ರಮವನ್ನೂ ತಡೆಯಬಹುದು. ಭಕ್ತರು ನಕಲಿ ಆಧಾರ್ ಕಾರ್ಡ್ಗಳ ಮೂಲಕ ದೇವಸ್ಥಾನದ ಆಡಳಿತದ ದಾರಿ ತಪ್ಪಿಸುವ ಸಾಧ್ಯತೆ ಇರುತ್ತದೆ. ಮುಖ ಗುರುತಿಸುವಿಕೆ ತಂತ್ರಜ್ಞಾನದಿಂದ ಇಂತಹ ಅಕ್ರಮಗಳಿಗೂ ಕಡಿವಾಣ ಹಾಕಬಹುದು’ ಎಂದು ಟಿಟಿಡಿಯ ಐಟಿ ವಿಭಾಗದ ಅಧಿಕಾರಿ ಸಂದೀಪ್ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.