ಶ್ರೀನಗರ: ಇಲ್ಲಿನ ದಾಲ್ ಸರೋವರದ ಸಮೀಪವಿರುವ ಏಷ್ಯಾದ ಅತಿದೊಡ್ಡ ಟ್ಯೂಲಿಪ್ ಹೂಗಳ ಉದ್ಯಾನವನ್ನು ಗುರುವಾರದಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಸಿರಾಜ್ ಬಾಗ್ ಎಂದು ಕರೆಯಲಾಗುತ್ತಿದ್ದ ಇಂದಿರಾ ಗಾಂಧಿ ಸ್ಮಾರಕ ಟ್ಯೂಲಿಪ್ ಉದ್ಯಾನವನ್ನು 2008ರಲ್ಲಿ ಜಮ್ಮು ಮತ್ತು ಕಾಶ್ಮೀರದ ಅಂದಿನ ಮುಖ್ಯಮಂತ್ರಿ ಗುಲಾಬ್ ನಬಿ ಆಜಾದ್ ಉದ್ಘಾಟಿಸಿದ್ದರು.
ಎರಡು ವರ್ಷಗಳ ನಂತರ ಉದ್ಯಾನವನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ಕೋವಿಡ್ ಲಾಕ್ಡೌನ್ ಕಾರಣಕ್ಕಾಗಿ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
‘ಹಿಮಚ್ಛಾದಿತ ಜಬರ್ವಾನ್ ಪರ್ವತ ಶ್ರೇಣಿಯ ತಪ್ಪಲಿನ 30 ಹೆಕ್ಟೇರ್ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಟ್ಯೂಲಿಪ್ ಹೂಗಳ ಉದ್ಯಾನದ ಉಸ್ತುವಾರಿಯನ್ನು ಕಾಶ್ಮೀರದ ಪ್ರವಾಸೋದ್ಯಮ ಇಲಾಖೆ ಕೈಗೊಂಡಿದೆ. ಇದೇ ಗುರವಾರದಿಂದ ಉದ್ಯಾನವನ್ನು ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗುತ್ತದೆ. ಈ ಉದ್ಯಾನದಲ್ಲಿ 62 ರೀತಿಯ ಸುಮಾರು 15 ಲಕ್ಷ ಟ್ಯೂಲಿಪ್ ಹೂಗಳಿವೆ’ ಎಂದು ಉದ್ಯಾನದ ಉಸ್ತುವಾರಿ ಇನಾಂ ರೆಹಮಾನ್ ಸೂಫಿ ತಿಳಿದ್ದಾರೆ.
ಪ್ರಧಾನಿ ಪ್ರೋತ್ಸಾಹ: ‘ಟ್ಯೂಲಿಪ್ ಉದ್ಯಾನ ನೋಡಲು ಕಾಶ್ಮೀರಕ್ಕೆ ತೆರಳಿ, ಅಲ್ಲಿನ ಜನರ ಆತಿಥ್ಯ ಸ್ವೀಕರಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರೂ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.