ಬೆಂಗಳೂರು: ಪರಿಶೀಲಿಸದೇ ಕೋಮು ಭಾವನೆ ಕೆರಳಿಸುವ ವಿಡಿಯೊ ಹಂಚಿಕೆಗೆ ಕಾರಣರಾಗಿದ್ದಾರೆ ಎಂಬ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿರುವ ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಮನೀಶ್ ಅವರಿಗೆ ಎರಡನೇ ನೋಟಿಸ್ ನೀಡಿದ್ದು, ‘ವಿಡಿಯೊ ಕಾಲ್ ಮೂಲಕ ವಿಚಾರಣೆಗೆ ಹಾಜಾರಾಗುವುದಕ್ಕೆ ಅವಕಾಶ ಇಲ್ಲ. ನೀವು ಸ್ವತಃ ಠಾಣೆಗೆ ಬಂದು ವಿಚಾರಣೆ ಎದುರಿಸಬೇಕು‘ ಎಂದು ತಿಳಿಸಿದ್ದಾರೆ.
ಜೂನ್ 5 ರಂದು ಟ್ವಿಟರ್ನಲ್ಲಿ ಕೆಲವರು, ‘72 ವರ್ಷದ ಮುಸ್ಲಿಂ ವ್ಯಕ್ತಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಹೇಳು‘ ಎಂದು ಥಳಿಸಿದ್ದಾರೆ ಎನ್ನಲಾದ ವಿಡಿಯೊವನ್ನು ಹಂಚಿಕೊಂಡಿದ್ದರು. ಇದು ವೈರಲ್ ಕೂಡ ಆಗಿತ್ತು. ನಂತರ ಪೊಲೀಸರು ಥಳಿತಕ್ಕೊಳಗಾಗಿದ್ದಾನೆ ಎನ್ನಲಾದ ವೃದ್ಧನನ್ನು ಕರೆಸಿ ವಿಚಾರಣೆ ನಡೆಸಿದಾಗ ಆತ, ‘ಟ್ವಿಟರ್ನಲ್ಲಿರುವ ವಿಡಿಯೋ ಸುಳ್ಳು, ಅದು ನಡೆದಿರುವುದು ಬೇರೆ ಕಾರಣಕ್ಕೆ‘ ಎಂದು ಹೇಳಿದ್ದ.
ಇದರಿಂದ ಸೆಕ್ಸನ್ 166 ರ ಅಡಿ (ಕೋಮು ಭಾವನೆ ಕೆರಳಿಸುವ) ಮನೀಶ್ ಮಹೇಶ್ವರಿ ಸೇರಿದಂತೆ ಕೆಲ ರಾಜಕೀಯ ಮುಖಂಡರು, ಪತ್ರಕರ್ತರ ಮೇಲೆ ಗಾಜಿಯಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಮನೀಶ್ ಮಹೇಶ್ವರಿ ಅವರು, ‘ತಮಗೆ ಠಾಣೆಗೆ ಬಂದು ವಿಚಾರಣೆ ಎದುರಿಸಲು ವಿನಾಯಿತಿ ನೀಡಬೇಕು. ಉಳಿದಂತೆ ಎಲ್ಲ ಸಹಕಾರ ನೀಡುತ್ತೇನೆ‘ ಎಂದು ಮನವಿ ಮಾಡಿದ್ದರು.
ಮನೀಶ್ ಅವರ ಬೇಡಿಕೆಯನ್ನು ಪರಿಶೀಲಿಸಲಾಗುತ್ತದೆ ಎಂದು ಗಾಜಿಯಾಬಾದ್ ಎಸ್ಪಿ ಇರಾಜ್ ರಾಜಾ ಹೇಳಿದ್ದರು. ಆದರೆ, ಇದೀಗ ‘ವಿಡಿಯೋ ಕಾಲ್ ವಿಚಾರಣೆಗೆ ಅವಕಾಶ ಇಲ್ಲ. ಜೂನ್ 24 ರಂದು ಮನೀಶ್ ಅವರು ಬೆಳಿಗ್ಗೆ 10.30 ಕ್ಕೆ ಠಾಣೆಗೆ ಬಂದು ವಿಚಾರಣೆ ಎದುರಿಸಬೇಕು‘ ಎಂದು ಹೇಳಿದ್ದಾರೆ.ಮನೀಶ್ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.