ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಅಮಾನತು ಮಾಡಿದ ಒಂದು ವಾರದ ಬಳಿಕ ಮರುಸ್ಥಾಪನೆ ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ, 'ಸತ್ಯಮೇವ ಜಯತೇ' ಎಂದಷ್ಟೇ ಬರೆದುಕೊಂಡಿದೆ.
ಕಳೆದ ವಾರ ದೆಹಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದೊಂದಿಗಿನ ಫೋಟೊವನ್ನು ರಾಹುಲ್ ಗಾಂಧಿ ಟ್ವೀಟ್ನಲ್ಲಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಟ್ವಿಟರ್ ಅಮಾನತುಗೊಳಿಸಿತ್ತು.
ಇದಕ್ಕೆ ವಿರೋಧ ಪಕ್ಷದ ಸದಸ್ಯರಿಂದ ಭಾರಿ ಆಕ್ಷೇಪವೂ ವ್ಯಕ್ತವಾಗಿತ್ತು. ಟ್ವಿಟರ್ ಪಕ್ಷಪಾತಿಯಾಗಿದೆ ಎಂದೂ ಕಾಂಗ್ರೆಸ್ ನಾಯಕರು ದೂರಿದ್ದರು. ರಾಜಕಾರಣದಲ್ಲಿ ಟ್ವಿಟರ್ ಹಸ್ತಕ್ಷೇಪ ಮಾಡುತ್ತಿದೆ ಎಂದು ರಾಹುಲ್ ಹರಿಹಾಯ್ದಿದ್ದರು.
ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ನ ಹಲವು ಪ್ರಮುಖ ನಾಯಕರ ಟ್ವಿಟರ್ ಖಾತೆಗಳನ್ನೂ ಅಮಾನತು ಮಾಡಲಾಗಿತ್ತು. ಇದು ಭಾರತದಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು.
'ಅಮಾನತುಗೊಂಡಿದ್ದ ಕಾಂಗ್ರೆಸ್ ನಾಯಕರ ಎಲ್ಲಾ ಖಾತೆಗಳನ್ನು ಮರುಸ್ಥಾಪನೆ ಮಾಡಲಾಗಿದೆ. ಇದಕ್ಕೆ ಟ್ವಿಟರ್ ಯಾವುದೇ ಕಾರಣವನ್ನು ನೀಡಿಲ್ಲ' ಎಂದು ಸಾಮಾಜಿಕ ಮಾಧ್ಯಮ ಖಾತೆಗಳ ಕಾಂಗ್ರೆಸ್ ಉಸ್ತುವಾರಿ ರೋಹನ್ ಗುಪ್ತಾ ಎನ್ಡಿಟಿವಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.