ಛತರಪುರ್ (ಮಧ್ಯಪ್ರದೇಶ): ತಾವು ಸೇವಿಸುತ್ತಿದ್ದ ಆಹಾರವನ್ನು ಮುಟ್ಟಿದ ಎಂಬ ಕಾರಣಕ್ಕೆ 25 ವರ್ಷದ ವ್ಯಕ್ತಿಯೊಬ್ಬರನ್ನು ಇಬ್ಬರು ಥಳಿಸಿದ್ದು, ಹಲ್ಲೆಗೊಳಗಾದ ವ್ಯಕ್ತಿ ನಂತರದಲ್ಲಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಛತರಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದರು.
ಆರೋಪಿಗಳಾದ ಭುರ ಸೋನಿ ಹಾಗೂ ಸಂತೋಷ್ ಪಾಲ್ ಕಿಶನ್ಪುರ್ ಹಳ್ಳಿಯ ಗದ್ದೆಯೊಂದರಲ್ಲಿ ಆಯೋಜಿಸಿದ್ದ ಪಾರ್ಟಿಗೆ ದಲಿತ ವ್ಯಕ್ತಿ ದೇವರಾಜ್ ಅನುರಾಗಿ ಅವರು ತೆರಳಿದ್ದರು. ಕುಟುಂಬ ಸದಸ್ಯರ ಪ್ರಕಾರ, ಆರೋಪಿಗಳೇ ಅನುರಾಗಿ ಅವರನ್ನು ಆಹ್ವಾನಿಸಿದ್ದರು.
ಪಾರ್ಟಿಗೆ ತೆರಳಿ ಮನೆಗೆ ಆಗಮಿಸಿದ್ದ ಅನುರಾಗಿ, ‘ಅವರ ಆಹಾರವನ್ನು ಮುಟ್ಟಿದ ಕಾರಣಕ್ಕೆ ನನ್ನನ್ನು ಥಳಿಸಿದ್ದಾರೆ’ ಎಂದು ಕುಟುಂಬ ಸದಸ್ಯರಿಗೆ ತಿಳಿಸಿದ್ದರು. ‘ಅನುರಾಗಿ ಅವರ ಬೆನ್ನ ಮೇಲೆ ಕೋಲಿನಿಂದ ಹೊಡೆದ ಗಾಯಗಳಿದ್ದವು. ಸೋಮವಾರ ರಾತ್ರಿ, ಎದೆನೋವು ಎಂದಿದ್ದ ಅವರು ನಂತರ ಮೃತಪಟ್ಟರು’ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ ಎಂದು ಎಸ್ಪಿ ಸಚಿನ್ ಶರ್ಮಾ ತಿಳಿಸಿದರು.
ಆರೋಪಿಗಳಿಬ್ಬರೂ ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಶರ್ಮಾ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.