ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ
ಪಿಟಿಐ ಚಿತ್ರಗಳು
ಮುಂಬೈ: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಹಾಗೂ ಸೋದರ ಸಂಬಂಧಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್ಎಸ್) ಮೈತ್ರಿ ಮಾತುಗಳು ಕೇಳಿ ಬರುತ್ತಿರುವೆ.
ಇದಕ್ಕೆ ಪುಷ್ಟಿ ನೀಡುವಂತೆ ಉದ್ಧವ್ ಠಾಕ್ರೆ ‘ಮಹಾರಾಷ್ಟ್ರದ ಜನರು ಏನೇ ಬಯಸಿದರೂ ಅದು ಆಗುತ್ತದೆ’ ಎಂದು ಶುಕ್ರವಾರ ತಿಳಿಸಿದ್ದಾರೆ. ಹಾಗೂ ಮೈತ್ರಿಯ ಕುರಿತಂತೆ ಎರಡೂ ಪಕ್ಷಗಳ ಕಾರ್ಯಕರ್ತರ ಮನಸ್ಸಿನಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ.
ಸೋದರ ಸಂಬಂಧಿಗಳಿಬ್ಬರು ಮೈತ್ರಿಗೆ ಸಂಬಂಧಿಸಿದಂತೆ ಈಚೆಗೆ ಹೇಳಿಕೆ ನೀಡಿದ್ದು, ಎರಡು ದಶಕಗಳ ಹಿಂದಿನ ಕಹಿಯನ್ನು ಮರೆತು ಒಂದಾಗಬಹುದು ಎಂದು ಹೇಳಲಾಗುತ್ತಿದೆ.
‘ಮರಾಠಿ ಭಾಷಿಕರ ಹಿತಾಸಕ್ತಿಗಾಗಿ ಒಗ್ಗೂಡುವುದು ಕಷ್ಟವೇನಲ್ಲ’ ಎಂದು ರಾಜ್ ಹೇಳಿದ್ದರೆ, ‘ಮಹಾರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸದಿದ್ದರೆ, ಕ್ಷುಲ್ಲಕ ವಿಚಾರಗಳನ್ನು ಬದಿಗಿಡಲು ಸಿದ್ಧ’ ಎಂದು ಉದ್ಧವ್ ಹೇಳಿದ್ದರು.
ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಪರಸ್ಪರ ಮಾತನಾಡಿದರೆ ಮಾತ್ರ ಮೈತ್ರಿ ಏರ್ಪಡಬಹುದು ಎಂದು ಎಂಎನ್ಎಸ್ ನಾಯಕ ಅಮಿತ್ ಠಾಕ್ರೆ ಮೈತ್ರಿಯ ಸಾಧ್ಯತೆಯ ಸುಳಿವು ನೀಡಿದ್ದಾರೆ.
ಮಹಾರಾಷ್ಟ್ರದ ಹಿತಾಸಕ್ತಿ ರಕ್ಷಿಸಲು ಯಾರಾದರೂ ನಮ್ಮೊಡನೆ ಒಗ್ಗೂಡಲು ಮುಂದಾದರೆ ಅವರನ್ನು ನಮ್ಮೊಟ್ಟಿಗೆ ಕರೆದೊಯ್ಯುತ್ತೇವೆ’ ಎಂದು ಉದ್ದವ್ ಪುತ್ರ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.