ಮುಂಬೈ: ಜನರು ನರಳುವುದನ್ನು ಸಹಿಸಿಕೊಂಡು ಸುಮ್ಮನೇ ಕುಳಿತುಕೊಳ್ಳಲು ನಾನೇನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶಿವಸೇನಾ ಮುಖವಾಣಿ ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕ ಹಾಗೂ ರಾಜ್ಯಸಭಾ ಸದಸ್ಯರೂ ಆಗಿರುವ ಸಂಜಯ್ ರಾವತ್ ಅವರಿಗೆ ನೀಡಿದ ವಿಡಿಯೊ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
ಉದ್ಧವ್ ಠಾಕ್ರೆ ಜನ್ಮದಿನದ ಅಂಗವಾಗಿ, ಜುಲೈ 25, 26 ಮತ್ತು 27ರಂದು ಸಾಮ್ನಾದಲ್ಲಿ ಪ್ರಕಟಿಸಲು ಉದ್ದೇಶಿಸಲಾಗಿರುವ ಸಂದರ್ಶನದ ತುಣುಕೊಂದನ್ನು(ಟೀಸರ್ ತರಹದ) ಬಿಡುಗಡೆ ಮಾಡಲಾಗಿದೆ.
ತಾವು ತೆಗೆದುಕೊಳ್ಳುವ ನಿರ್ಧಾರಗಳು ಯಾವುದೇ ಭಯ ಅಥವಾ ಪಕ್ಷಪಾತದಿಂದ ಕೂಡಿರುವುದಿಲ್ಲ. ಅವು ಜನರ ಹಿತವನ್ನು ಆಧರಿಸಿರುತ್ತವೆ ಎಂದು ಉದ್ಧವ್ ಠಾಕ್ರೆ ವಿಡಿಯೊ ತುಣುಕಿನಲ್ಲಿ ತಿಳಿಸಿದ್ದಾರೆ.
'ನನ್ನ ಕಣ್ಣ ಮುಂದೆ ಜನರು ನರಳುತ್ತಿರುವುದನ್ನು ಸಹಿಸಿಕೊಂಡು ಸಮ್ಮನಿರಲು ನಾನೇನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲ್ಲ' ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರವು ದೇಶದ ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿದೆ. ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಡವಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.