ADVERTISEMENT

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶವನ್ನು ನಾಶಮಾಡುವ ಯತ್ನ: ಕೇಜ್ರಿವಾಲ್

ಪಿಟಿಐ
Published 24 ಮಾರ್ಚ್ 2023, 12:34 IST
Last Updated 24 ಮಾರ್ಚ್ 2023, 12:34 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌   

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶುಕ್ರವಾರ ಹೇಳಿದ್ದಾರೆ.

ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಲೆಫ್ಟಿನೆಂಟ್ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರ ಕೆಲಸಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶವನ್ನು ನಾಶಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿಯವರಿಗೆ ಹೇಳಲು ಬಯಸುತ್ತೇನೆ. ದೇಶದ ವಿನಾಶವನ್ನು ಬಯಸುವವರು ಬಿಜೆಪಿಯಲ್ಲೇ ಇರಿ, ಯಾರಿಗೆ ದೇಶವನ್ನು ರಕ್ಷಿಸುವ ಬಯಕೆ ಇದೆಯೋ ಅವರೆಲ್ಲಾ ಬಿಜೆಪಿಯನ್ನು ತೊರೆಯಿರಿ' ಎಂದಿದ್ದಾರೆ.

ADVERTISEMENT

ಕೇಜ್ರಿವಾಲ್ ಅವರು ಮೋದಿ ವಿರುದ್ಧ ಮಾತನಾಡುತ್ತಿದ್ದಂತೆಯೇ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಕ್ರಿಮಿನಲ್‌ ಮಾನಹಾನಿ ಪ್ರಕರದಲ್ಲಿ ತಪ್ಪಿತಸ್ಥರಾಗಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರ ಲೋಕಸಭೆ ಸದಸ್ಯತ್ವ ರದ್ದುಗೊಳಿಸಿರುವ ವಿಚಾರವನ್ನೂ ಇದೇ ವೇಳೆ ಉಲ್ಲೇಖಿಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್‌, 'ಅವರು (ಕೇಂದ್ರ ಸರ್ಕಾರದವರು) ಭಯಗೊಂಡಿದ್ದಾರೆ' ಎಂದು ಕುಟುಕಿದ್ದಾರೆ.

ದೆಹಲಿ ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ಒಟ್ಟಿಗೆ ಕೆಲಸ ಮಾಡುವಂತೆ ಲೆಫ್ಟಿನೆಂಟ್ ಗವರ್ನರ್‌ ಸಕ್ಸೇನಾ ಅವರಿಗೆ ಮನವಿ ಮಾಡಿದ್ದಾರೆ.

'ಗುಜರಾತ್‌ನಿಂದ ಆಗಮಿಸಿರುವ ನೀವು ನಮ್ಮ ಅತಿಥಿಗಳು ಎಂದು ಸಕ್ಸೇನಾ ಅವರಿಗೆ ಹೇಳಲು ಬಯಸುತ್ತೇನೆ. ಅವರಿಗೆ ದೆಹಲಿ ರಸ್ತೆಗಳ ಹೆಸರುಗಳಾದರೂ ಗೊತ್ತಿವೆ ಎಂದು ನನಗನ್ನಿಸುತ್ತಿಲ್ಲ.‌ ನಾವು ಅವರೊಂದಿಗೆ ಜಗಳವನ್ನು ಬಯಸುವುದಿಲ್ಲ. ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ. ಪ್ರತಿ ಮನೆಗೂ ಒಳಚರಂಡಿ ಸಂಪರ್ಕ ಕಲ್ಪಿಸಬೇಕಿದೆ. ಬಸ್‌ ಸಂಪರ್ಕ ನೀಡಬೇಕಿದೆ. ಸಂಚಾರ ಪರಿಸ್ಥಿತಿ ಸುಧಾರಿಸಬೇಕಿದೆ. ಇವೆಲ್ಲವನ್ನೂ ಒಟ್ಟಿಗೆ ಮಾಡೋಣ' ಎಂದು ತಿಳಿಸಿದ್ದಾರೆ.

'ನಾವು ನಿಮ್ಮೊಂದಿಗೆ ಕೆಲಸ ಮಾಡುತ್ತೇವೆ. ಇದೇನು ಭಾರತ–ಪಾಕಿಸ್ತಾನ ಕದನವಲ್ಲ. ಮುಖ್ಯಮಂತ್ರಿ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಒಟ್ಟಿಗೆ ಕೆಲಸ ಮಾಡಲು ಆರಂಭಿಸಿದರೆ, ಅದೇ ಡಬಲ್‌ ಎಂಜಿನ್‌ ಸರ್ಕಾರವಾಗಿರುತ್ತದೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.