ADVERTISEMENT

ಸಾರ್ವಕಾಲಿಕ ಮಟ್ಟಕ್ಕೆ ನಿರುದ್ಯೋಗ, ಬಿಜೆಪಿಯಿಂದ ಶ್ರೀಮಂತರಿಗೆ ರಕ್ಷಣೆ: ರಾಹುಲ್

ಪಿಟಿಐ
Published 17 ಸೆಪ್ಟೆಂಬರ್ 2022, 1:59 IST
Last Updated 17 ಸೆಪ್ಟೆಂಬರ್ 2022, 1:59 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಕೊಲ್ಲಂ: ನಿರುದ್ಯೋಗ ಸಾರ್ವಕಾಲಿಕ ಮಟ್ಟಕ್ಕೆ ಏರಿಕೆಯಾಗಿದ್ದು, ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಶ್ರೀಮಂತ ಉದ್ಯಮಿಗಳನ್ನು ರಕ್ಷಿಸಲು ಆಸಕ್ತಿ ಹೊಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

'ಭಾರತ್ ಜೋಡೊ ಯಾತ್ರೆ'ಯ ಒಂಬತ್ತನೇ ದಿನ ಕೇರಳದ ಕರುನಾಗಪಲ್ಲಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಈಗ ದೇಶದ ನಾಯಕನ ನಿಕಟವರ್ತಿಯಾಗಿದ್ದಾರೆ ಎಂದು ಹೇಳಿದರು.

ನಾನು ಸರಳ ಪ್ರಶ್ನೆ ಕೇಳಲು ಬಯಸುತ್ತೇನೆ. ಭಾರತವು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯನ್ನು ಹೊಂದಿದ್ದರೂ ನಾವು ಏಕೆ ಅತಿ ಹೆಚ್ಚು ನಿರುದ್ಯೋಗ ಮಟ್ಟವನ್ನು ಹೊಂದಿದ್ದೇವೆ ಎಂದು ಪ್ರಶ್ನಿಸಿದರು.

ಸರ್ಕಾರವು ಶ್ರೀಮಂತ ಉದ್ಯಮಿಗಳನ್ನು ಮಾತ್ರ ರಕ್ಷಿಸಲು ಆಸಕ್ತಿ ವಹಿಸಿದೆ. ಇದರಿಂದಾಗಿ ದೇಶದಲ್ಲಿ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ರಾಹುಲ್ ಗಾಂಧಿ ದೂರಿದರು.

ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣ ಮತ್ತು ಹೂಡಿಕೆ ಹಿಂತೆಗೆತದಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದರು.

ಸಾರ್ವಜನಿಕ ವಲಯದ ಉದ್ಯಮವನ್ನು ಯಾರು ನೋಡಿಕೊಳುತ್ತಿದ್ದಾರೆ? ಅದು ದೇಶದ ಐದಾರು ಉದ್ಯಮಿಗಳ ಬಳಿಗೆ ಹೋಗುತ್ತಿದೆ. ಉದ್ಯಮಿಗಳು ಸರ್ಕಾರದ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಜನರಲ್ಲಿ ದ್ವೇಷವನ್ನು ಬಿತ್ತುತ್ತಿವೆ. ಅವರು ಧರ್ಮ, ಭಾಷೆಯ ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿದ್ದಾರೆ. ಆರ್‌ಎಸ್‌ಎಸ್ ಪಾಲಿಗೆ ದೇಶದ ಮಹಿಳೆಯರು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.