ನವದೆಹಲಿ: ಪ್ರಸಕ್ತ ಮತ್ತು ಕೊರೊನೋತ್ತರ ಕಾಲದಲ್ಲಿ ಶೈಕ್ಷಣಿಕ ವ್ಯವಸ್ಥೆಯ ಸ್ಥಿತಿಗತಿಯನ್ನು ಕುರಿತು ಚರ್ಚಿಸಲು ಅಕ್ಟೋಬರ್ 22ರಂದು ಯುನೆಸ್ಕೊ, ಉನ್ನತ ಮಟ್ಟದ ವಿಶೇಷ ಸಭೆ ಕರೆಯಲಿದೆ. ಪ್ರಮುಖ ರಾಜಕೀಯ ಮುಖಂಡರು, ನೀತಿ ನಿರೂಪಕರು, ಜಾಗತಿಕ ಶಿಕ್ಷಣ ತಜ್ಞರು ಉದ್ದೇಶಿತ ಸಭೆಯಲ್ಲಿ ಪಾಲ್ಗೊಳ್ಳುವರು.
ಕೋವಿಡ್ ನಿಂದಾಗಿ ಸರ್ಕಾರಗಳ ಬಜೆಟ್ ಮೇಲೆ ಆಗಿರುವ ಪರಿಣಾಮದಿಂದಾಗಿ ಶೈಕ್ಷಣಿಕ ನಿಧಿಗೆ ದೇಣಿಗೆ ಕಡಿಮೆ ಆಗಿದೆ. ಇಂಥ ಸ್ಥಿತಿಯಲ್ಲಿ ಶೈಕ್ಷಣಿಕ ವ್ಯವಸ್ಥೆಯ ಹಿತರಕ್ಷಣೆ ಮತ್ತು ಚೇತರಿಕೆ ನೀಡುವುದು ಸಭೆಯ ಉದ್ದೇಶ ಎಂದು ಹೇಳಿಕೆ ತಿಳಿಸಿದೆ.
ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ವ್ಯವಸ್ಥೆಯ ಚೇತರಿಕೆ ಮತ್ತು ಸುಸ್ಥಿರತೆಯನ್ನು ರಕ್ಷಿಸಿಕೊಳ್ಳುವುದು ಹಾಗೂ ಇದಕ್ಕಾಗಿ ರಾಜಕೀಯ ಮುಖಂಡರ ಬದ್ಧತೆಯನ್ನು ಪಡೆದುಕೊಳ್ಳುವುದು ಇದರ ಸಭೆ ಪ್ರಮುಖ ಉದ್ದೇಶ ಎಂದು ಯುನೆಸ್ಕೊ ಸಹಾಯಕ ನಿರ್ದೇಶಕಿ (ಶಿಕ್ಷಣ) ಸ್ಟೆಫಾನಿಯ ಗಿಯಾನಿನಿ ಹೇಳಿದರು.
ನಿಧಿಯ ಮೊತ್ತವನ್ನು ಉತ್ತಮಪಡಿಸಲು ಆಗದಿದ್ದರೆ, ಕನಿಷ್ಠ ಈಗಿನ ಮಟ್ಟವನ್ನು ಕಾಯ್ದುಕೊಳ್ಳುವುದು ನಮ್ಮ ಈಗಿನ ಆದ್ಯತೆ. ಹೊಸ ವಾಸ್ತವಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಹೆಚ್ಚು ವಿಶ್ವಾಸಾರ್ಹತೆ ಮತ್ತು ಸಮಗ್ರತೆಯ ಸಹಕಾರ ಅಗತ್ಯವಿದೆ. ನೀತಿ ಮತ್ತು ಹಣಕಾಸು ನೆರವಿನ ನಡುವೆ ಸಮತೋಲನ ಅಗತ್ಯವಿದೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.