ಪಣಜಿ: ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯ್ಕ ಅವರಿಗೆ ಇನ್ನೂ ನಾಲ್ಕು ದಿನಗಳ ಕಾಲ ಆಮ್ಲಜನಕ ನೀಡುವುದನ್ನು ಮುಂದುವರಿಸಲಾಗುವುದು ಎಂದುಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಹೇಳಿದ್ದಾರೆ.
ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶ್ರೀಪಾದ ನಾಯ್ಕ ಅವರು ಚೇತರಿಕೆಯ ಹಾದಿಯಲ್ಲಿದ್ದು, ಅವರಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿರುವುದರಿಂದ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮೂಗಿನ ಮೂಲಕ ಆಮ್ಲಜನಕ ಪೂರೈಸಲಾಗುವುದು’ ಎಂದರು.
‘ಕೊರೊನಾ ಪೀಡಿತರಾಗಿರುವ ಶ್ರೀಪಾದ ನಾಯ್ಕ ಅವರು 14 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಏಮ್ಸ್ ತಜ್ಞರ ತಂಡ ಎರಡನೇ ಬಾರಿ ಭೇಟಿ ಮಾಡಿ ತಪಾಸಣೆ ನಡೆಸಿದೆ. ಶ್ರೀಪಾದ ಅವರು ಚೇತರಿಕೆಯ ಹಾದಿಯಲ್ಲಿದ್ದು, ಅವರನ್ನು ದೆಹಲಿಯ ಏಮ್ಸ್ ಗೆ ದಾಖಲಿಸುವ ಅಗತ್ಯವಿಲ್ಲವೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.
ಈ ನಡುವೆ ಗೋವಾ ಸ್ಪೀಕರ್ ರಾಜೇಶ್ ಪಟ್ನೇಕರ್ ಅವರು ವೈದ್ಯರ ಸಲಹೆ ಮೇರೆಗೆ ವೈದ್ಯಕೀಯ ಪರೀಕ್ಷೆಗಾಗಿ ಗೋವಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಡಳಿತ ಮತ್ತು ವಿರೋಧಪಕ್ಷ ಸೇರಿ ಒಟ್ಟು 40 ಸದಸ್ಯರ ಗೋವಾ ಸದನದಲ್ಲಿ ಎರಡು ವಾರದ ಅವಧಿಯೊಳಗೆ ಎಲ್ಲರಿಗೂ ಕೋವಿಡ್–19 ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಕೋವಿಡ್ ಪಾಸಿಟಿವ್ ಫಲಿತಾಂಶ ಬಂದ ನಾಲ್ವರು ಶಾಸಕರು ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.